ಶೃಂಗೇರಿ: ಪಟ್ಟಣದಲ್ಲಿ 10 ದಿನಗಳಿಂದ ನಡೆಯುತ್ತೀರುವ ಪೌರಕಾರ್ಮಿಕರ ಮುಷ್ಕರದಿಂದ ಸ್ವಚ್ಛತೆ ಇಲ್ಲದೆ ಗಲ್ಲಿಗಳಲ್ಲಿ ದುರ್ವಾಸನೆ ಬೀರುತ್ತಿದ್ದು ಜನರ ನೆಮ್ಮದಿ ಹಾಳಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 25 ವರ್ಷಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು ನೇರಪಾವತಿ, ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರನ್ನು ಕಾಯಂ ಮಾಡಬೇಕು ಎಂದು ಪಟ್ಟು ಹಿಡಿದು ಮುಷ್ಕರದಲ್ಲಿ ತೊಡಗಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಕಸದ ರಾಶಿ ಹೆಚ್ಚಾಗುತ್ತಿದೆ.
ಶೃಂಗೇರಿ, ಪ್ರಸಿದ್ಧ ಕ್ಷೇತ್ರ ಹಾಗೂ ದೊಡ್ಡ ಪ್ರವಾಸಿ ಕೇಂದ್ರವಾಗಿದೆ. ಪ್ರತಿ ವರ್ಷ 60ರಿಂದ 70 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಪಟ್ಟಣ ಪಂಚಾಯಿತಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ಪ್ರತಿದಿನ 2 ಟನ್ ಘನತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದು ಹನುಮಂತ ನಗರದಲ್ಲಿರುವ 5 ಎಕ್ರೆ ವಿಸ್ತೀರ್ಣದ ಕಸವಿಲೇವಾರಿ ಘಟಕಕ್ಕೆ ಸಾಗಿಸಿ ಒಣ ಮತ್ತು ಹಸಿಕಸ ಬೇರ್ಪಡಿಸಲಾಗುತ್ತಿದೆ.
1300ಕ್ಕೂ ಹೆಚ್ಚು ಮನೆಗಳಿರುವ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 4000ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಕಳೆದ ಸೋಮವಾರ ನಡೆದ ಸಂತೆಯ ನಂತರ ತರಕಾರಿಗೆ ಸಂಬಂಧಿಸಿದ ಕಸ ಮಾರುಕಟ್ಟೆಯಲ್ಲೇ ಉಳಿದಿದೆ. ಹಸಿಕಸ ಕೊಳೆತು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಮಿಕ ರೋಗ ಹರಡುವ ಭೀತಿ ಉಂಟಾಗಿದೆ.
ಪೌರಕಾರ್ಮಿಕರ ಸಮಸ್ಯೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದ್ದೇನೆ. ಸರ್ಕಾರದ ಮಟ್ಟದಲ್ಲಿ ತಿರ್ಮಾನ ಆಗಬೇಕಾಗಿದೆ. ಅತಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ.–ಟಿ.ಡಿ ರಾಜೇಗೌಡ ಶಾಸಕ
ಪಟ್ಟಣದಲ್ಲಿ ಕಸ ವೀಲೆವಾರಿಯಾಗದೆ 10 ದಿನಗಳು ಕಳೆದಿವೆ. ಗಲ್ಲಿ ಗಲ್ಲಿಗಳಲ್ಲಿ ಕಸ ಬಿದ್ದುಕೊಂಡು ಕೊಳೆತ ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗವ ಪರಿಸ್ಥಿತಿ ನಿರ್ಮಾಣವಾಗಿದೆ.–ಗಣೇಶ್ ಸ್ಥಳೀಯ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.