ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿರುವುದರಿಂದ ಸೋಮವಾರ ಆರೋಗ್ಯ ಶಿಬಿರ ಆಯೋಜಿಸಿ ತಪಾಸಣೆ ಮಾಡಲಾಯಿತು.
ಶಿಬಿರದಲ್ಲಿ 135 ಮಂದಿ ತಪಾಸಣೆ ಮಾಡಲಾಗಿದೆ. ನಾಲ್ವರು ವೈದ್ಯರು, ಆಶಾಕಾರ್ಯಕರ್ತೆಯರು ಸಹಿತ 25 ಆರೋಗ್ಯ ಸಿಬ್ಬಂದಿ ಇದ್ದರು. ರಕ್ತದೊತ್ತಡ, ಮಧುಮೇಹ ಸಹಿತ ಸಾಮಾನ್ಯ ತಪಾಸಣೆ ಮಾಡಿದರು.
ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ತಪಾಸಣೆ ನಡೆಸಿದರು. ರೋಗಿಗಳಿಗೆ ಔಷಧಗಳನ್ನು ವಿತರಿಸಿದರು.
ಶುಚಿತ್ವ ಕಾಪಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು. ಸೊಳ್ಳೆ, ನೋಣಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
‘ಜ್ವರ ಇದ್ದ 9 ಮಂದಿ ರಕ್ತ ಲೇಪನ, ಮೂವರ ರಕ್ತ ಮಾದರಿ ಒಟ್ಟು 12 ಮಂದಿ ರಕ್ತ ಸಂಗ್ರಹಿಸಲಾಗಿದೆ. ರಕ್ತವನ್ನು ಪರೀಕ್ಷೆಗೆ ಜಿಲ್ಲಾ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ’ ಎಂದು ಆರೋಗ್ಯ ಸಹಾಯಕ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರಾಮದಲ್ಲಿ ದುರ್ನಾತ, ನೋಣ, ಸೊಳ್ಳೆಗಳ ಕಾಟ ವಿಪರೀತ ಇದೆ. ಹಲವರು ಜ್ವರ, ತಲೆಭಾರ, ಮೈಕೈ ನೋವು, ಸುಸ್ತು ಬಳಲುತ್ತಿದ್ದಾರೆ. ಗ್ರಾಮದ ಸಮೀಪದ ಕಸ ಘಟಕವೇ ಇದಕ್ಕೆಲ್ಲ ಕಾರಣ. ಸಂಬಂಧಪಟ್ಟವರು ಕಸ ಘಟಕ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು’ ಎಂದು ಗ್ರಾಮದ ಮಂಜುನಾಥ್ ಒತ್ತಾಯಿಸಿದರು.
‘ಗ್ರಾಮದಲ್ಲಿ ಪರಿಶೀಲನೆ ಮಾಡಿದ್ದೇವೆ. ಜನರಿಗೆ ಆರೋಗ್ಯ ಮಾಹಿತಿ ನೀಡಿದ್ದೇವೆ. ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಬಳಸುವಂತೆ ಸಲಹೆ ನೀಡಿದ್ದೇವೆ. ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಮಾರ್ಗದರ್ಶನ ನೀಡಿದ್ದೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಸೀಮಾ ತಿಳಿಸಿದರು.
‘ದುರ್ನಾತ ತಪ್ಪಿಸಲು, ಸೊಳ್ಳೆ, ನೋಣಗಳ ನಿಯಂತ್ರಣಕ್ಕೆ ಆದ್ಯ ಗಮನ ಹರಿಸಬೇಕು. ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದರು.
‘ಜ್ವರ ಇದ್ದವರ ರಕ್ತ ಮಾದರಿ ಸಂಗ್ರಹಿಸಲಾಗಿದೆ. ರಕ್ತ ಪರೀಕ್ಷೆ ನಂತರ ವೈರಲ್ ಜ್ವರವೋ, ಡೆಂಗಿ ಜ್ವರವೋ, ಮಲೇರಿಯಾ, ಚಿಕುನ್ ಗುನ್ಯಾವೋ ಎಂಬುದು ಗೊತ್ತಾಗಲಿದೆ’ ಎಂದರು.