ಕಳಸ: ಜೂನ್ ತಿಂಗಳ ಕೊನೆಯ ದಿನವಾದ ಗುರುವಾರ ತಾಲ್ಲೂಕಿನಲ್ಲಿ ಮುಂಗಾರು ಮನೆ ಮಾಡಿತ್ತು.
ಬೆಳಿಗ್ಗೆ 7ರಿಂದ ಆರಂಭವಾದ ಜಡಿಮಳೆ ಮಧ್ಯಾಹ್ನದವರೆಗೆ ಸುರಿಯಿತು. ಮಳೆಯ ಜೊತೆಗೆ ತಣ್ಣಗಿನ ಗಾಳಿ ಬೀಸಿ ತಾಪಮಾನ ಕುಗ್ಗಿಸಿತು. ಸಂಜೆ ಮತ್ತೆ ಮಳೆ ಚುರುಕಾಗಿತ್ತು. ಹಳ್ಳಗಳೆಲ್ಲ ಮೈದುಂಬಿ ಭದ್ರಾ ನದಿಯಲ್ಲಿನ ನೀರಿನ ಪ್ರಮಾಣ ಏರಿಕೆಯಾಯಿತು.
ಮಳೆಯಿಂದ ಕಾಳುಮೆಣಸಿನ ಬಳ್ಳಿಗಳಲ್ಲಿ ಹೂ ಗೆರೆಗಳನ್ನು ಮೂಡಿಸಬಹುದು ಎಂಬ ಆಶಾಭಾವನೆ ಮೂಡಿದೆ. ಗೊಬ್ಬರದ ಅಲಭ್ಯತೆ ಕಾರಣಕ್ಕೆ ಈವರೆಗೂ ತೋಟಕ್ಕೆ ಗೊಬ್ಬರ ಪೂರೈಸದೆ ಕೃಷಿಕರು ತಡಕಾಡುತ್ತಿದ್ದು, ಭತ್ತದ ಗದ್ದೆಗಳಲ್ಲಿ ಚಟುವಟಿಕೆ ಹೆಚ್ಚುವ ನಿರೀಕ್ಷೆ ಮೂಡಿದೆ.
ಆಲ್ದೂರಿನಲ್ಲಿ ಮಳೆ
ಆಲ್ದೂರು: ಆಲ್ದೂರು ಸುತ್ತಮುತ್ತ ಬನ್ನೂರು, ಆಗಳ, ಬೈಗೂರು, ಭೂತನಕಾಡು, ಚಂಡು ಗೋಡು, ಕಂಚಿನ ಕಲ್ಲು ದುರ್ಗಾಗಳಲ್ಲಿ ಮಳೆಯಾಗಿದೆ.
‘ಭತ್ತದ ನಾಟಿಗೆ ಮಳೆ ಅನುಕೂಲಕರವಾಗಿದ್ದು, ಕಾಫಿ ಬೆಳೆಗಾರರಿಗೆ ಹೆಚ್ಚಿನ ಹಾನಿ ಉಂಟುಮಾಡುವುದಿಲ್ಲ’ ಎಂದು ಆಲ್ದೂರು ಕಾಫಿ ಬೆಳೆಗಾರರ ಹೋಬಳಿ ಅಧ್ಯಕ್ಷ ಸಿ. ಸುರೇಶ್ ತಿಳಿಸಿದರು.
ಚಿಕ್ಕಮಾಗರವಳ್ಳಿ ಗ್ರಾಮದ ಮುಖ್ಯ ರಸ್ತೆಯ ಚರಂಡಿ ಮತ್ತು ಸೇತುವೆ ಸಮರ್ಪಕವಾಗಿಲ್ಲ. ಮಳೆನೀರಿನಿಂದ ರಸತೆ ಜಲಾವೃತವಾಗುತ್ತದೆ. ದುರಸ್ತಿ ಮಾಡಬೇಕು ಎಂದು ಎಂದು ಸ್ಥಳೀಯ ವಿಶ್ವನಾಥ್ ಒತ್ತಾಯಿಸಿದರು.