ಕೊಪ್ಪ: ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 256 ಮತಗಟ್ಟೆಗಳಿಗೆ ಮತಯಂತ್ರ ತಲುಪಿಸಲು ಪಟ್ಟಣ ಸಮೀಪದ ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ಗುರುವಾರ ನಡೆಯಿತು.
ಮತಯಂತ್ರ ಇರಿಸಿದ್ದ ಸ್ಟ್ರಾಂಗ್ ರೂಂ ಅನ್ನು ಬಿಗಿ ಭದ್ರತೆಯಲ್ಲಿ ಬೆಳಿಗ್ಗೆ 9 ಗಂಟೆಗೆ ತೆರೆಯಲಾಯಿತು. ಚುನಾವಣಾ ಕಾರ್ಯಕ್ಕೆ ವಿವಿಧೆಡೆಯಿಂದ ಆಗಮಿಸಿದ ಸಿಬ್ಬಂದಿ ಮಧ್ಯಾಹ್ನ ಊಟದ ಬಳಿಕ ಇವಿಎಂ, ವಿವಿ ಪ್ಯಾಟ್ನೊಂದಿಗೆ ತಮಗೆ ನಿಗದಿಪಡಿಸಿದ ಮತಗಟ್ಟೆಗೆ ತೆರಳಿದರು.
ಮತಗಟ್ಟೆಗಳಿಗೆ ಮತಯಂತ್ರ ತಲುಪಿಸಲು 45 ಬಸ್, 65 ಟೆಂಪೊ ಟ್ರಾವೆಲ್ಲರ್, ಜೀಪು ಖಾಸಗಿ ವಾಹನ ಒಳಗೊಂಡು ಒಟ್ಟು 110 ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಮತಗಟ್ಟೆಯೊಂದಕ್ಕೆ ಮತಗಟ್ಟೆ ಚುನಾವಣಾಧಿಕಾರಿ, ಸಹಾಯಕ ಮತಗಟ್ಟೆ ಚುನಾವಣಾಧಿಕಾರಿ, ಮತಗಟ್ಟೆ ಅಧಿಕಾರಿ, ಡಿ ದರ್ಜೆ ನೌಕರ ಒಬ್ಬರನ್ನು ನೇಮಿಸಲಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರೆಡ್ಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಸಹಾಯಕ ಚುನಾವಣಾಧಿಕಾರಿ ಎಸ್.ಜಿ.ಕೊರವರ, ತಹಶೀಲ್ದಾರ್ ಮಂಜುಳಾ ಬಿ.ಹೆಗಡಾಳ ಮತ್ತಿತರ ಅಧಿಕಾರಿಗಳು ಇದ್ದರು.
ಚುನಾವಣೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಿಬ್ಬಂದಿ ಇದ್ದರೂ ಊಟಕ್ಕೆ ಕೇವಲ 2 ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ನೂಕು ನುಗ್ಗಲು ಉಂಟಾಯಿತು. ‘ಸಿಬ್ಬಂದಿಯ ಊಟಕ್ಕೆ ಹಣ ಬಂದಿರುತ್ತದೆ. ಆದರೆ ಊಟ ಕಳಪೆಯಾಗಿತ್ತು’ ಎಂದು ಚುನಾವಣೆ ಕರ್ತವ್ಯದಲ್ಲಿದ್ದ ಹೊರ ಜಿಲ್ಲೆಯ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.