ಚಿಕ್ಕಮಗಳೂರು: ಅಣಬೆ ಕೃಷಿ ಮೂಲಕ ರೈತರು ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈ.ಆರ್.ಮಹೇಶ್ ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಣಬೆ ಕೃಷಿ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಕಡಿಮೆ ವೆಚ್ಚ ಮತ್ತು ಕಡಿಮೆ ಜಾಗದಲ್ಲಿ ಅಣಬೆ ಕೃಷಿ ಮಾಡಬಹುದು. ಈ ಕೃಷಿಯಿಂದ ಹೆಚ್ಚು ಲಾಭ ಗಳಿಸಬಹುದಾಗಿದೆ. ಅಣಬೆ ಶುದ್ಧ ಸಸ್ಯಾಹಾರವಾಗಿದ್ದು ಮಾಹಿತಿ ಕೊರತೆಯಿಂದ ಜನರು ಅಣಬೆಯನ್ನು ಮಾಂಸಹಾರ ಎಂದು ಭಾವಿಸಿದ್ದಾರೆ. ಮಲೆನಾಡು ಭಾಗದಲ್ಲಿ ಅಣಬೆ ಕೃಷಿಯನ್ನು ಹೆಚ್ಚಾಗಿ ಕಾಣಬಹುದು ಎಂದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಮಾತನಾಡಿ, ಅಣಬೆ ಸೇವನೆಯಿಂದ ಅಪೌಷ್ಟಿಕ ನಿವಾರಣೆಯಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಜಿ.ಸೋಮಶೇಖರಪ್ಪ, ಜಸಂತಾಅನಿಲ್ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರೇಖಾ ಅನಿಲ್, ದಾಕ್ಷಾಯಿಣಿ ಪೂರ್ಣೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಇದ್ದರು.