ತರೀಕೆರೆ: ‘ಪುರಸಭೆಯಿಂದ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆ’ ಎಂಬ ತಲೆಬರಹದಲ್ಲಿ ಮೇ 20ರಂದು ಭಾನುವಾರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ಸುದ್ದಿ ಓಡಿ ತಡವಾಗಿ ಎಚ್ಚೆತ್ತು ಕೊಂಡ ಪುರಸಭೆ ಅಧಿಕಾರಿಗಳು ಶುಕ್ರವಾರ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರಾ ನದಿಯಿಂದ ನೀರು ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಪುರಸಭೆ ಮಾನಸಿಕೆರೆಯಲ್ಲಿ ಸಂಗ್ರಹಿಸಿದ್ದ ನೀರನ್ನು ಜನರಿಗೆ ಕುಡಿಯಲು ಪೂರೈಸುತ್ತಿತ್ತು. ಆದರೆ, ನೀರು ಸರಿಯಾಗಿ ಕ್ಲೋರಿನೇಷನ್ ಆಗದ ಕಾರಣ ಅದು ಕುಡಿಯಲು ಯೋಗ್ಯವಿರಲಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪುರಸಭೆ ಅಧ್ಯಕ್ಷೆ ಟಿ.ಎಲ್.ಅಶ್ವಿನಿ, ನೀರು ಶುದ್ಧೀಕರಣಕ್ಕೆ ಬಳಸುತ್ತಿರುವ ದ್ರಾವಣ ಪ್ರಮಾಣದ ಮಾಹಿತಿಯನ್ನು ಪಡೆದುಕೊಂಡರು. ಕುಡಿಯುವ ನೀರಿನ ಕುರಿತು ಗಂಭೀರ ಕ್ರಮ ಅನುಸರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಎಂಜಿನಿಯರ್ ಬಿಂದು ಸುದ್ದಿಗಾರರಿಗೆ ಮಾಹಿತಿ ನೀಡಿ ಕ್ಲೋರಿನೇಷನ್ ಪ್ರಮಾಣವನ್ನು ದುಪ್ಪಟ್ಟು ಹೆಚ್ಚಿಸುವ ಮೂಲಕ ನೀರು ಶುದ್ಧೀಕರಣಕ್ಕೆ ಪ್ರಯತ್ನಿಸಲಾಗಿದೆ. ನೀರು ಸಂಪೂರ್ಣ ಕುಡಿಯಲು ಯೋಗ್ಯವಾಗಿದೆ. ಪಟ್ಟಣದಲ್ಲಿರುವ ಎಲ್ಲಾ ಕಿರು ನೀರು ಘಟಕಗಳನ್ನು ಸಹ ಶುದ್ಧೀಕರಣಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ರಮೇಶ್, ಮುಖ್ಯಾಧಿಕಾರಿ ಮಹೇಶ್ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.