ಚಿಕ್ಕಮಗಳೂರು: ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ.72ರಷ್ಟು ಮತದಾನ ನಡೆಯಿತು. 17 ಸ್ಥಾನಗಳಿಗೆ 39 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ನಗರದ ಜೆವಿಎಸ್ ಕಾಲೇಜಿನಲ್ಲಿ 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 345ರವರೆಗೆ ಮತದಾನ ನಡೆಯಿತು. ಸಂಜೆ 4 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. 17 ನಿರ್ದೇಶಕ ಸ್ಥಾನ ಗಳಿಗೆ 39 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಇದೇ ಮೊದಲ ಬಾರಿಗೆ ಎಲ್ಲ ಸ್ಥಾನ ಗಳಿಗೆ ಚುನಾವಣೆ ನಡೆದಿದ್ದು, ಸದಸ್ಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಂಡುಬಂತು.
ಸುಮಾರು 5 ಸಾವಿರ ಮಂದಿ ಮತದಾರರಿದ್ದು, ಸುಮಾರು 3794 ಮತದಾರರು ಮತ ಚಲಾಯಿಸಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ.
ಮೂಡಿಗೆರೆ ತಾಲ್ಲೂಕು ಮಹಿಳಾ ಕ್ಷೇತ್ರಕ್ಕೆ ಮಾಕೋನಹಳ್ಳಿ ಸಾವಿತ್ರಿ ಸೋಮಶೇಖರ್ 726 ಮತಗಳನ್ನು ಪಡೆದು ಆಯ್ಕೆಯಾದರು.
ಈ ಕ್ಷೇತ್ರಕ್ಕೆ 865 ಮತ ಚಲಾವಣೆಯಾಗಿದ್ದವು. ಇವರ ಪ್ರತಿಸ್ಪರ್ಧಿಯಾಗಿದ್ದ ಬೆಳಗೋಡು ಕೆ.ಆರ್.ಕನಕ ಅವರಿಗೆ 139 ಮತಗಳು ಮಾತ್ರ ಲಭಿಸಿವೆ.
ಕಡೂರು ತರೀಕೆರೆ ಸಾಮಾನ್ಯ ಸ್ಥಾನಕ್ಕೆ ರಂಗೇನಹಳ್ಳಿ ಎಂ.ಡಿ.ದೇವೇಗೌಡ ಚಲಾವಣೆಯಾದ 204 ಮತಗಳ ಪೈಕಿ 125 ಮತಗಳನ್ನು ಪಡೆದು ಆಯ್ಕೆ ಯಾಗಿದ್ದಾರೆ.
ಚಿಕ್ಕಮಗಳೂರಿನ ಸಾಮಾನ್ಯ 2 ಸ್ಥಾನಗಳಲ್ಲಿ ಹಳಿಯೂರಿನ ಎಚ್.ಎಸ್.ಕವೀಶ್ ಹಾಗೂ ಜಿ.ಎಸ್.ಚಂದ್ರಪ್ಪ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರು ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮಲ್ಲಂದೂರಿನ ಎಚ್.ಆರ್.ಕನಕ ಆಯ್ಕೆಯಾದರು. ಮೂಡಿಗೆರೆ ಸಾಮಾನ್ಯ ಕ್ಷೇತ್ರಕ್ಕೆ ಮುಗ್ರಹಳ್ಳಿಯ ಪ್ರದೀಪ್ ಕುಮಾರ್ ಆಯ್ಕೆಯಾದರು.
ಉಳಿದ ಸ್ಥಾನಗಳ ಮತ ಎಣಿಕೆ ರಾತ್ರಿಯೂ ಮುಂದುವರಿದಿತ್ತು.