ತಾಲ್ಲೂಕು ಆಡಳಿತ ಕೇಂದ್ರ ಕಚೇರಿಯೂ ಇಲ್ಲೇ ಇದ್ದು, ಈ ಜಾಗದ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ತೆರಿಗೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಇಲಾಖೆಯ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ತ್ಯಾಗರಾಜನಗರ ಹಾಗೂ ಇತರೆ ಬೀದಿಗಳಿಂದ ಚರಂಡಿಗಳ ಮೂಲಕ ಹರಿಯುವ ಕೊಳಚೆ ನೀರು ಇಳಿಜಾರು ಪ್ರದೇಶವಾಗಿರುವುದರಿಂದ ಇಲ್ಲಿನ ಗುಂಡಿಗಳಿಗೆ ಬಂದು ಸೇರುತ್ತಿದೆ. ಕೊಳಚೆ ನೀರು ಹರಿದು ಹೋಗಲು ಒಳಚರಂಡಿ ಇಲ್ಲದೇ ಕೊಳಚೆ ಶೇಖರಣೆಯಾಗಿ ಗಬ್ಬು ನಾರುತ್ತಿದೆ. ತಾಲ್ಲೂಕು ಆಡಳಿತದ ಮುಂದೆಯೇ ಈ ಸಮಸ್ಯೆ ಇದ್ದು, ಬೇರೆ ಕಡೆಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂದು ಜನರು ಪ್ರಶ್ನಿಸುತ್ತಿದ್ದಾರೆ.