ಬಸ್ ನಿಲ್ದಾಣದ ಶೌಚಾಲಯದ ಪಕ್ಕದಲ್ಲಿಯೇ ಹಳೇ ಗುಂಡಿಯಿದೆ. ಆದರೆ ಹಳೇ ಗುಂಡಿ ಚಿಕ್ಕದಾಗಿರುವುದರಿಂದ ಬಹುಬೇಗ ಭರ್ತಿಯಾಗಿ, ಹೊಯ್ಸಳ ಕ್ರೀಡಾಂಗಣದ ಒಳಚರಂಡಿಗೆ ತ್ಯಾಜ್ಯ ಹರಿಯ ತೊಡಗುತ್ತದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ, ಹೊಯ್ಸಳ ಕ್ರೀಡಾಂಗಣದಲ್ಲಿ ವಾಯುವಿಹಾರ ನಡೆಸುವವರಿಗೆ ಹಾಗೂ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಮಳೆಗಾಲ ಪ್ರಾರಂಭವಾದರೆ ದುರ್ನಾತ ಬೀರತೊಡಗುತ್ತದೆ. ಈ ಸಮಸ್ಯೆ ತಪ್ಪಿಸುವ ಸಲುವಾಗಿ, ಶೌಚಾಲಯದ ಪಕ್ಕದಲ್ಲಿಯೇ ನೂತನ ಗುಂಡಿಯಲ್ಲಿ, ತ್ಯಾಜ್ಯ ಸಂಗ್ರಹಿಸಲು ಘಟಕ ನಿರ್ಮಿಸಲಾಗುತ್ತಿತ್ತು. ಆದರೆ ಅದರ ಕಾಮಗಾರಿ ಕುಸಿದಿರುವುದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಇನ್ನಷ್ಟು ದಿನಗಳ ಕಾಲ ಬಸ್ ನಿಲ್ದಾಣದ ಅಕ್ಕಪಕ್ಕದಲ್ಲಿರುವ ನಿವಾಸಿಗಳು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬದುಕಬೇಕಾದ ಸ್ಥಿತಿ ಬಂದಿದೆ.