ಬೀರೂರು: ಪಟ್ಟಣದ ಹಲವು ಬಡಾವಣೆಗಳಲ್ಲಿ ಕಸ ವಿಲೇವಾರಿ ಸೂಕ್ತವಾಗಿ ಆಗದೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಹಲವರು ದೂರಿದ್ದಾರೆ.
ಪುರಸಭೆಯು ಮನೆ ಕಂದಾಯ ವಸೂಲಿ ಸಂದರ್ಭದಲ್ಲಿ ಮಾಸಿಕ ₹20ಗಳನ್ನು ತ್ಯಾಜ್ಯ ವಿಲೇವಾರಿಗಾಗಿಯೇ ಸಂಗ್ರಹಿಸುತ್ತದೆ. ಆದರೆ ಕಾರ್ಮಿಕರ ಕೊರತೆ ನೆಪ ಒಡ್ಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ. ಮನೆ ಮನೆಗಳಿಂದ ಕಸ ಸಂಗ್ರಹಿಸುವ ಗಾಡಿಗಳು ನಿಯಮಿತವಾಗಿ ಕಾರ್ಯ ನಿರ್ವಹಿಸದೆ ಕಸ ಸಂಗ್ರಹಣೆ ಹೆಚ್ಚುತ್ತಿದೆ. ಪೌರಕಾರ್ಮಿಕರು ಚರಂಡಿಯಿಂದ ತೆಗೆದ ಕಸವನ್ನು ಶೀಘ್ರವಾಗಿ ತೆರವು ಮಾಡದ ಕಾರಣ ಧೂಳು, ಅನೈರ್ಮಲ್ಯ, ಅನಾರೋಗ್ಯಕರ ವಾತಾವರಣ ಉಂಟಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.
ಈ ಕುರಿತು ‘ ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಎಂ.ಜಿ. ಕಾಂತರಾಜು, ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿರುವುದರಿಂದ ಮತ್ತು ಮಳೆ ಕೊರತೆ ಯಿಂದ ಸಹಜವಾಗಿ ಧೂಳಿನ ವಾತಾವರಣ ಉಂಟಾಗುತ್ತಿದೆ. ಪಟ್ಟಣದಲ್ಲಿ 13 ಜನ ಕಾಯಂ ನೌಕರರು ಮತ್ತು 13 ಜನ ಹೊರಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಹೊರಗುತ್ತಿಗೆ ನೌಕರರ ವೇತನ ಸಮಸ್ಯೆ ಬಗೆಹರಿಸಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಪಟ್ಟಣದಲ್ಲಿ ಕಸ ಸಂಗ್ರಹಿಸಲು ನಾಲ್ಕು ಆಟೊ ಟಿಪ್ಪರ್ ಅಳವಡಿಸಲು ತೀರ್ಮಾನಿಸಲಾಗಿದೆ.
ಶೀಘ್ರವಾಗಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸ್ಥಳ ಗುರುತಿಸಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ಸಿಕ್ಕಿದ ತಕ್ಷಣ ಘಟಕ ಸ್ಥಾಪನೆಗೆ ಮುಂದಾಗುವುದಾಗಿ ತಿಳಿಸಿದರು.
–ಎನ್.ಸೋಮಶೇಖರ್