ಮೊಳಕಾಲ್ಮುರು: ಈಚೆಗೆ ನಡೆದ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ತಾಲ್ಲೂಕಿಗೆ 27 ಶಿಕ್ಷಕರು ಆಯ್ಕೆಯಾಗಿ ಬಂದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ಹೇಳಿದರು.
ಸಮನ್ವಯ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ನೂತನ ಶಿಕ್ಷಕರಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ 230ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಕಾಡುತ್ತಿದೆ. ಅತಿಥಿ ಶಿಕ್ಷಕರನ್ನು ನಿಯೋಜಿಸಿ ಪಾಠ ಮಾಡಿಸಲಾಗುತ್ತಿದೆ. ಈಗ 27 ಪದವೀಧರ ಕಾಯಂ ಶಿಕ್ಷಕರು ತಾಲ್ಲೂಕಿಗೆ ಬಂದಿರುವುದು ಸಂತಸದ ಸಂಗತಿ. ತಾಲ್ಲೂಕು ಆಂಧ್ರ ಗಡಿಯಲ್ಲಿದ್ದು ಶೈಕ್ಷಣಿಕ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ನೂತನ ಶಿಕ್ಷಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಈರಣ್ಣ, ಕಾರ್ಯದರ್ಶಿ ಮಲ್ಲೇಶಪ್ಪ, ಸಮನ್ವಯ ಶಿಕ್ಷಣಾಧಿಕಾರಿ ಕೆ. ತಿಪ್ಪೇಸ್ವಾಮಿ, ಬಿಆರ್ ಪಿ ತಿಪ್ಪೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಶಿಕ್ಷಣ ಸಂಯೋಜಕ ಎಚ್. ಓಂಕಾರಪ್ಪ ಇದ್ದರು.