ಹಿರಿಯೂರು: ‘ರಾಜ್ಯ ಸರ್ಕಾರ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಶೇ 60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬರೆಸುವಂತೆ ಮಾಡಿರುವ ಆದೇಶವನ್ನು ವರ್ತಕರು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ ತಾಕೀತು ಮಾಡಿದರು.
ನಗರದಲ್ಲಿ ಬುಧವಾರ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಫಲಕಗಳಲ್ಲಿ ಕನ್ನಡದ ಅಕ್ಷರಗಳನ್ನು ದೊಡ್ಡದಾಗಿ ಬರೆಸಿ, ಅನ್ಯ ಭಾಷಿಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಚಿಕ್ಕ ಅಕ್ಷರಗಳಲ್ಲಿ ಬೇರೆ ಭಾಷೆಯಲ್ಲಿ ಬರೆಸಿ. ಫೆಬ್ರುವರಿ 10ನೇ ತಾರೀಖಿನ ಒಳಗೆ ಸರ್ಕಾರದ ಆದೇಶದನ್ವಯ ಫಲಕಗಳು ಇರಬೇಕು. ಇಲ್ಲವಾದಲ್ಲಿ ಅಂತಹ ಫಲಕಗಳಿಗೆ ಮಸಿ ಬಳಿಯುವ, ತೆರವುಗೊಳಿಸುವ ಕಾರ್ಯ ಮಾಡಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.
ವೇದಿಕೆಯ ಗೌರವಾಧ್ಯಕ್ಷ ಗೋ. ಬಸವರಾಜ್, ಪ್ರಧಾನ ಕಾರ್ಯದರ್ಶಿ ಡಿ.ಕೆ.ಎಸ್. ದಾದಾಪೀರ್, ನಗರ ಘಟಕದ ಅಧ್ಯಕ್ಷ ಮೊಹಮ್ಮದ್ ಜಾಕೀರ್, ಉದಯಶಂಕರ್, ಹುಚ್ಚವನಳ್ಳಿ ರಮೇಶ್, ರಾಜಣ್ಣ, ಗೌಡ್ರುಗಿರೀಶ್, ಸುಹೇಲ್, ಮುಬಾರಕ್, ಪಂಕ್ಚರ್ ರಂಗಸ್ವಾಮಿ, ಅನ್ಸರ್, ರಫೀಕ್, ಅಫ್ರಿದ್ ಪಾಲ್ಗೊಂಡಿದ್ದರು.