ಚಿತ್ರದುರ್ಗ: ಕಾಂಗ್ರೆಸ್ ‘ತಾರಾ ಪ್ರಚಾರಕಿ’ ಪ್ರಿಯಾಂಕಾ ಗಾಂಧಿ ಹೆಲಿಕಾಪ್ಟರ್ಗೆ ನಿಗದಿಪಡಿಸಿದ ಹೆಲಿಪ್ಯಾಡ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಇಳಿದಿದ್ದರಿಂದ ಕೆಲ ಹೊತ್ತು ಗೊಂದಲ ಸೃಷ್ಟಿಯಾಗಿತ್ತು.
ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಕಾಂಗ್ರೆಸ್ ಮಂಗಳವಾರ ಹಮ್ಮಿಕೊಂಡಿದ್ದ ‘ನ್ಯಾಯ ಸಂಕಲ್ಪ ರ್ಯಾಲಿ’ಗೆ ಇಬ್ಬರು ನಾಯಕರು ಆಗಮಿಸಿದಾಗ ಈ ಘಟನೆ ನಡೆಯಿತು.
ನಗರದ ಹೊರವಲಯದ ಎಸ್ಜೆಎಂ ಶಾಲಾ ಆವರಣದಲ್ಲಿ ಎರಡು ಹೆಲಿಪ್ಯಾಡ್ಗಳಿವೆ. ಶಾಲಾ ಮುಂಭಾಗದ ಹೆಲಿಪ್ಯಾಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕಾಪ್ಟರ್ಗೆ ಹಾಗೂ ಕಾಂಪೌಂಡ್ ಹೊರಭಾಗದಲ್ಲಿದ್ದ ಹೆಲಿಪ್ಯಾಡ್ ಅನ್ನು ಪ್ರಿಯಾಂಕಾ ಗಾಂಧಿ ಅವರ ಹೆಲಿಕಾಪ್ಟರ್ಗೆ ನಿಗದಿಪಡಿಸಲಾಗಿತ್ತು. ಮೊದಲು ಬಂದ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಕಾಂಪೌಂಡ್ ಹೊರಭಾಗದಲ್ಲಿ ಇಳಿಯಿತು.
ತಕ್ಷಣ ಜಾಗೃತರಾದ ಭದ್ರತಾ ಸಿಬ್ಬಂದಿ ಈ ತಪ್ಪಿನ ಬಗ್ಗೆ ಪೈಲಟ್ ಗಮನ ಸೆಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಳಗೆ ಇಳಿದ ಬಳಿಕ ಟೇಕ್ಆಫ್ ಮಾಡಿದ ಹೆಲಿಕಾಪ್ಟರ್ ಶಾಲಾ ಮುಂಭಾಗದಲ್ಲಿ ನಿಗದಿಪಡಿಸಿದ ಹೆಲಿಪ್ಯಾಡ್ನಲ್ಲಿ ಇಳಿಯಿತು. ಕೆಲ ಹೊತ್ತಿನ ಬಳಿಕ ಪ್ರಿಯಾಂಕಾ ಗಾಂಧಿ ಅವರ ಹೆಲಿಕಾಪ್ಟರ್ ನಿಗದಿಪಡಿಸಿದ ಹೆಲಿಪ್ಯಾಡ್ಗೆ ಬಂದಿಳಿಯಿತು.