ಸಿರಿಗೆರೆ: ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಬರುವ ಕಾತ್ರಾಳು ಕೆರೆಗೆ ಭಾನುವಾರ ರಾತ್ರಿ ದುಷ್ಕರ್ಮಿಗಳು ರೋಗದಿಂದ ಸತ್ತಿರುವ ನೂರಾರು ಕೋಳಿಗಳನ್ನು ಎಸೆದಿದ್ದಾರೆ.
ಸೋಮವಾರ ಬೆಳಿಗ್ಗೆ ಸುತ್ತಲಿನ ಗ್ರಾಮಸ್ಥರು ಕೆರೆಯಲ್ಲಿನ ಕೋಳಿಗಳನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದರು.
ಕೆರೆಯ ಬಳಿ ಬಂದ ಕಾತ್ರಾಳು, ಬಳ್ಳೇಕಟ್ಟೆ, ಸಾದರಹಳ್ಳಿ, ಬೀರಾವರ ಗ್ರಾಮಸ್ಥರು, ‘ಕೋಳಿಗಳು ರೋಗಕ್ಕೆ ತುತ್ತಾಗಿ ಸತ್ತಿವೆ. ಅವುಗಳನ್ನು ಸಮರ್ಪಕ ವಿಲೇವಾರಿ ಮಾಡದೇ ಕೆರೆಗೆ ಎಸೆದಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರದಿಂದ ನೀರಿನ ಸಮಸ್ಯೆ ಹೆಚ್ಚಿರುವ ಈ ಸಂದರ್ಭದಲ್ಲಿ ಕೆರೆಗೆ ಸತ್ತ ಕೋಳಿ ಎಸೆದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.