ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌ ಕಂಪನಿಗಳ ಮೇಲೆ ಮುಗಿಬಿದ್ದ ತನಿಖಾ ಸಂಸ್ಥೆಗಳು

Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ವಂಚಿಸಿದ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಹಾಗೂ ಪಾಲುದಾರರಿಗೆ ಸೇರಿದ ಕಂಪನಿಗಳ ಮೇಲೆ ಹಲವಾರು ತನಿಖಾ ಸಂಸ್ಥೆಗಳು ಒಮ್ಮೆಲೆ ಮುಗಿಬಿದ್ದಿವೆ.

ಸಿಬಿಐ ಅಧಿಕಾರಿಗಳು ದೆಹಲಿಯ ಪಿಎನ್‌ಬಿ ಬ್ರಾಡಿ ಹೌಸ್‌ ಶಾಖೆಯಲ್ಲಿ ಭಾನುವಾರ ಆರಂಭಿಸಿದ್ದ ಶೋಧ ಕಾರ್ಯಾಚರಣೆ ಸೋಮವಾರ ಅಂತ್ಯಗೊಂಡಿದೆ.

ಸೋಮವಾರ ಬೆಳಿಗ್ಗೆ ಬ್ಯಾಂಕ್‌ಗೆ ಬೀಗ ಹಾಕಿದ್ದ ಅಧಿಕಾರಿಗಳು, ಪೊಲೀಸ್‌ ಭದ್ರತೆಯಲ್ಲಿ ದಾಖಲೆಗಳಿಗಾಗಿ ಜಾಲಾಡಿದರು. ಮಧ್ಯಾಹ್ನ ಬೀಗ ತೆರವುಗೊಳಿಸಿದ ನಂತರ ಬ್ಯಾಂಕ್‌ ವಹಿವಾಟು ಆರಂಭವಾಯಿತು.

ಈ ನಡುವೆ ನೀರವ್‌ ಮೋದಿ ಅವರ ಫೈರ್‌ ಸ್ಟಾರ್‌ ವಜ್ರಾಭರಣ ಸಂಸ್ಥೆಯ  ಹಣಕಾಸು ವಿಭಾಗದ ಅಧ್ಯಕ್ಷ ವಿಪುಲ್‌ ಅಂಬಾನಿ, ಮುಖ್ಯ ಹಣಕಾಸು ಅಧಿಕಾರಿ ರವಿ ಗುಪ್ತಾ, ಅಧಿಕಾರಿಗಳಾದ ಸೌರಭ್‌ ಶರ್ಮಾ, ಸುಭಾಸ್‌ ಪರಬ್‌ ಅವರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.

ವಿಪುಲ್‌ ಅವರು ಉದ್ಯಮಿ ಧೀರೂಬಾಯಿ ಅಂಬಾನಿ ಅವರ ಸಂಬಂಧಿ ಎನ್ನಲಾಗಿದೆ.

ಹಗರಣದಲ್ಲಿ ಈ ಮೊದಲು ಬಂಧಿಸಲಾದ ಪಿಎನ್‌ಬಿಯ ಇಬ್ಬರು ಅಧಿಕಾರಿಗಳು ಮಹತ್ವದ ಸುಳಿವು ನೀಡಿದ್ದಾರೆ. ಇದರೊಂದಿಗೆ ಉಳಿದ 13 ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರೀಯ ಜಾಗೃತ ಆಯುಕ್ತ ಕೆ.ವಿ. ಚೌಧರಿ ಅವರು ಪಿಎನ್‌ಬಿ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ.

ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಕರ್ನಲ್‌ ಸಿಂಗ್‌ ಅವರು ಮುಂಬೈಗೆ ಧಾವಿಸಿದ್ದಾರೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ನೀರವ್‌ ಮೋದಿ ಹಾಗೂ ಇತರರಿಗೆ ಸೇರಿದ 12ಕ್ಕೂ ಹೆಚ್ಚು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

‘ಆರ್‌ಬಿಐ, ಗವರ್ನರ್‌ ಕೂಡ ಹೊಣೆ’

ಮುಂಬೈ: ಪಂಜಾಬ್‌ ನ್ಯಾಷನಲ್ ಬ್ಯಾಂಕ್‌–ನೀರವ್‌ ಮೋದಿ ಹಗರಣದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮತ್ತು ಅದರ ಗವರ್ನರ್‌ಗಳು ಕೂಡ ಹೊಣೆ ಹೊರಬೇಕಾಗುತ್ತದೆ ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘ (ಎಐಬಿಇಎ) ಹೇಳಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಷ್ಟೇ ಆರ್‌ಬಿಐ ಕೂಡ ಉತ್ತರದಾಯಿತ್ವ ಹೊಂದಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಕೂಡ ಅನೇಕ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸ್ಟೇಟ್‌ ಬ್ಯಾಂಕ್‌ ಉದ್ಯೋಗಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಶ್ವಾಸ್‌ ಉಟಗಿ ಹೇಳಿದ್ದಾರೆ.

ಹಗರಣ ನಡೆದಾಗ ಆರ್‌ಬಿಐ ಗವರ್ನರ್‌ಗಳಾದ ವೈ.ವಿ. ರೆಡ್ಡಿ, ಡಿ. ಸುಬ್ಬಾರಾವ್‌, ರಘುರಾಂ ರಾಜನ್‌ ಮತ್ತು ಉರ್ಜಿತ್‌ ಪಟೇಲ್‌ ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.

2011ರಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಸಾಲ ಖಾತರಿ ಪತ್ರದ ಬಗ್ಗೆ ಏಕೆ ಆರ್‌ಬಿಐ ಮತ್ತು ಪಿಎನ್‌ಬಿ ಆಡಳಿತ ಏಕೆ ಆಕ್ಷೇಪ ಎತ್ತಲಿಲ್ಲ. ಹಲವು ಹಂತದ ಪರಿಶೀಲನೆ ವ್ಯವಸ್ಥೆ ಇದ್ದರೂ ಯಾವ ಹಂತದಲ್ಲೂ ಈ ಅಕ್ರಮಗಳ ಬಗ್ಗೆ ಯಾಕೆ ಪ್ರಸ್ತಾಪಿಸಲಿಲ್ಲ ಎಂದು ಉಟಗಿ ಪ್ರಶ್ನಿಸಿದ್ದಾರೆ.

ಬ್ಯಾಂಕ್‌ ಶಾಖೆಗಳ ಹಂತದ ಅಧಿಕಾರಿಗಳಿಗಿಂತ ಉನ್ನತ ಮಟ್ಟದ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT