ಹೊನ್ನಾಳಿ: ಎತ್ತುಗಳ ಮೈ ತೊಳೆಯಲು ತುಂಗಭದ್ರಾ ನದಿಗೆ ತೆರಳಿದ್ದ ತಾಲ್ಲೂಕಿನ ಹಿರೇಗೊಣಿಗೆರೆ ಗ್ರಾಮದ ಮೂವರು ಯುವಕರು ಭಾನುವಾರ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಗ್ರಾಮದ ಕಿರಣ್ (21), ಪವನ್ ಕುಮಾರ್ (19) ಮತ್ತು ವರುಣ್ (19) ನೀರು ಪಾಲಾದವರು. ವರುಣ್ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರು ಯುವಕರಿಗಾಗಿ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ.
ಬಸವ ಜಯಂತಿ ದಿನ ಈ ವರ್ಷದ ಬೇಸಾಯ ಆರಂಭಿಸುವ ಪದ್ಧತಿ ಇದೆ. ಸ್ನೇಹಿತರಾಗಿರುವ ಈ ಯುವಕರು ಜಮೀನಿಗೆ ತೆರಳಿ ಬೇಸಾಯ ಹೂಡಿದ ಬಳಿಕ ದಣಿದ ಎತ್ತುಗಳಿಗೆ ಮೈ ತೊಳೆದು, ನೀರು ಕುಡಿಸುವ ಸಲುವಾಗಿ ನದಿಗೆ ಇಳಿದಿದ್ದರು.
ಎತ್ತುಗಳೊಂದಿಗೆ ಮೊದಲು ನದಿಗೆ ಇಳಿದಿದ್ದ ಕಿರಣ್ ಅವರು ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಆತನನ್ನು ರಕ್ಷಿಸಲು ಧಾವಿಸಿದ ಪವನ್ಕುಮಾರ್
ಮತ್ತು ವರುಣ್ ಸಹ ನೀರು ಪಾಲಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.