ಚಿತ್ರದುರ್ಗ: ‘ಮೀನುಗಾರರ ಸಂಘ ಬಲಿಷ್ಠವಾಗಿ ಬೆಳೆಯಬೇಕು. ಕೆರೆಗಳನ್ನು ಮೀಸಲಾತಿ ಅನ್ವಯ ಗುತ್ತಿಗೆ ನೀಡುವ ಕುರಿತು ಸರ್ಕಾರ ಗಮನಹರಿಸಬೇಕು. ಕೆರೆಗಳು ನಮ್ಮ ಮೀನುಗಾರರಿಗೆ ಸಿಗಬೇಕು. ಆ ನಿಟ್ಟಿನಲ್ಲಿ ನಾವುಗಳು ಪ್ರಯತ್ನಿಸಬೇಕು’ ಎಂದು ಜಿಲ್ಲಾ ಗಂಗಾಂಬಿಕ ಬೆಸ್ತರ ಸಂಘದ ಸಂಘಟನಾ ಕಾರ್ಯದರ್ಶಿ ಜಿ. ರವಿಚಂದ್ರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಡಿಸೆಂಬರ್ 14ರಂದು ನಡೆಯುವ ಮೀನುಗಾರರ ಸ್ವಾಭಿಮಾನಿ ರಾಷ್ಟ್ರೀಯ ಸಮಾವೇಶದಲ್ಲಿ ಸರ್ಕಾರದ ಮುಂದೆ ಈಡಬೇಕಾದ ಬೇಡಿಕೆಗಳ ಕುರಿತು ಚರ್ಚಿಸಲು ಇಲ್ಲಿನ ಸುಣ್ಣದಗುಮ್ಮಿ ಸಮೀಪದ ಆಂಜನೇಯಸ್ವಾಮಿ ದೇಗುಲ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸ್ಥಳೀಯ ಮುಖಂಡರ ಸಭೆಯಲ್ಲಿ ಮಾತನಾಡಿದರು.
‘ಸ್ಥಳೀಯ ಮೀನುಗಾರರ ಸಂಘಗಳ ಸ್ಥಾಪನೆಗೆ ಒತ್ತು ನೀಡಬೇಕು. ಮೀನುಗಾರರು ಬೆಳೆದರೆ ಸಮುದಾಯವೇ ಅಭಿವೃದ್ಧಿಯಾದಂತೆ. ಈ ಕಾರಣದಿಂದಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು’ ಎಂದರು.
ರಾಷ್ಟ್ರೀಯ ಮೀನುಗಾರರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಹೆಜ್ನಾಡಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನಿರಂಜನ್ ಅವರನ್ನು ಇದೇ ಸಂದರ್ಭದಲ್ಲಿ ನೇಮಕ ಮಾಡಿದರು.
ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಡಿ. ರವಿಕುಮಾರ್, ಖಜಾಂಚಿ ಸುರೇಶ್ ಅಂತೂರ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಆವಿನ್, ಮುಖಂಡರಾದ ಮಹೇಶ್, ಗಿರೀಶ್, ಗುರುಮೂರ್ತಿ, ನಾಗೇಶ್, ವಿ.ಎ. ಮಹೇಶ್ ಅವರೂ ಇದ್ದರು.