ಚಿತ್ರದುರ್ಗ: ‘ಆಪ್ತರೊಬ್ಬರ ನಿವೇಶನಕ್ಕೆ ಇ–ಸ್ವತ್ತು ಪಡೆಯಲು ಹೊಸದುರ್ಗ ಪುರಸಭೆಯ ಅಧ್ಯಕ್ಷರಿಗೆ ₹ 50 ಲಕ್ಷ ಲಂಚವನ್ನು ನಾನೇ ಕೊಡಿಸಿದ್ದೆ. ಆಗ ಶಾಸಕರಾಗಿದ್ದ ಗೂಳಿಹಟ್ಟಿ ಡಿ.ಶೇಖರ್ ಅವರಿಗೆ ಇದರಲ್ಲಿ ಎಷ್ಟು ಪಾಲು ಹೋಗಿದೆ ಎಂಬುದನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ. ಅವರು ಚರ್ಚೆಗೆ ಬರಲಿ’ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಸವಾಲೆಸೆದರು.
‘ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಶಾಸಕ ಬಿ.ಜಿ. ಗೋವಿಂದಪ್ಪ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಅವರು ಮೌನವಾಗಿದ್ದಾರೆ’ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾಡಿದ ಆರೋಪದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಹರಿದಾಡಿದ್ದರಿಂದ ಶಾಸಕ ಗೋವಿಂದಪ್ಪ ಈ ಪ್ರತಿಕ್ರಿಯೆ ನೀಡಿದರು.