ಚಳ್ಳಕೆರೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಬಿಸಿಯೂಟ ತಯಾರಕರು ಹಾಗೂ ಅಡುಗೆ ಸಹಾಯಕಿಯರು, ನಗರದ ತಾಲ್ಲೂಕು ಪಂಚಾಯಿತಿ ಸಂಭಾಗಣಕ್ಕೆ ತೆರಳಿ ಗುರುವಾರ ಶಾಸಕರಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಎಐಟಿಯುಸಿ ಸಂಘಟನೆ ಮುಖಂಡ ಸಿ.ವೈ.ಶಿವರುದ್ರಪ್ಪ, ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಪಕ್ಷದ ಪ್ರಣಾಳಿಕೆಯಂತೆ ರಾಜ್ಯದ ಬಿಸಿಯೂಟ ತಯಾರಕರ ವೇತನ ₹ 3,700ರಿಂದ ₹10,000ಕ್ಕೆ ಹೆಚ್ಚಿಸಬೇಕು. ಸೇವಾ ಭದ್ರತೆ ಒದಗಿಸಲು ಬಜೆಟ್ನಲ್ಲಿ ಹಣ ಮೀಸಲಿರಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಶಾಸಕರನ್ನು ಆಗ್ರಹಿಸಿದರು.
‘ಬಿಸಿಯೂಟ ತಯಾರಕರು ಹಾಗೂ ಸಹಾಯಕರ ಮಕ್ಕಳಿಗೆ ಪದವಿವರೆಗೆ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಬೇಕು. ನಿವೃತ್ತಿ ಹೊಂದಿದ ಬಿಸಿಯೂಟ ತಯಾರಕರಿಗೆ ₹ 2 ಲಕ್ಷ ಇಡುಗಂಟಿನ ಜತೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯ ಒದಗಿಸಬೇಕು’ ಸಂಘಟನೆ ಜಿಲ್ಲಾ ಮುಖಂಡ ದೊಡ್ಡಉಳ್ಳಾರ್ತಿ ಕರಿಯಣ್ಣ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕ ಟಿ.ರಘುಮೂರ್ತಿ, ‘ಕಾಂಗ್ರೆಸ್ ನೇತೃತ್ವದ ಸರ್ಕಾರ ಬಿಸಿಯೂಟ ಕಾರ್ಯಕರ್ತೆಯರ ಪರವಾಗಿದೆ. ಹಾಗಾಗಿ ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಂತ್ರಿ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.
ಬಿಸಿಯೂಟ ತಯಾರಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಸುನಂದಮ್ಮ, ಕಾರ್ಯದರ್ಶಿ ಅನುಸೂಯಮ್ಮ, ಸಂಚಾಲಕಿ ಶಶಿರೇಖಾ ಮಾತನಾಡಿದರು. ಸದಸ್ಯೆ ಲಕ್ಷ್ಮೀದೇವಿ, ಸರೋಜಮ್ಮ, ಮಂಜುಳಾ, ಗೀತಾ, ಕಮಲ, ಗಾಯಿತ್ರಿ, ರಾಧಮ್ಮ, ರತ್ನಮ್ಮ ಇದ್ದರು.