ಚಳ್ಳಕೆರೆ: ಶೇ 50 ರಷ್ಟು ರಿಯಾಯಿತಿ ದರದಲ್ಲಿ ಬಿತ್ತನೆಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ವಿತರಣೆಗೆ ಆಗ್ರಹಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ರೇಹಾನ್ಪಾಷ ಅವರಿಗೆ ಮನವಿ ಸಲ್ಲಿಸಿದರು.
ಹಸಿರು ಸೇನೆ ರಾಜ್ಯ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ‘2023ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯ ತೀವ್ರ ಅಭಾವದ ಪರಿಣಾಮ ಇಟ್ಟಂತಹ ಫಸಲು ಒಣಗಿದ್ದರಿಂದ ಬೆಳೆ ವಿಫಲವಾಗಿತ್ತು. ಹೀಗಾಗಿ ಬರ ಮತ್ತು ಬೆಳೆ ವಿಫಲತೆಯಿಂದ ಕಂಗೆಟ್ಟಿರುವ ತಾಲ್ಲೂಕಿನ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಂಠಮೂರ್ತಿ ಮಾತನಾಡಿ, ರೈತರಿಗೆ ಕೂಡಲೇ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಜಮೆ ಮಾಡಬೇಕು. ಈ ಬಾರಿ ಮುಂಗಾರು ಹಂಗಾಮಿಗೆ ಬಿತ್ತನೆಗೆ ಅಗತ್ಯವಾದ ಉತ್ತಮ ತಳಿಯ ಗುಣಮಟ್ಟದ ಶೇಂಗಾ ಬೀಜ ವಿತರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಘಟಕದ ಅಧ್ಯಕ್ಷ ಬುಡ್ನಹಟ್ಟಿ ಓಬಯ್ಯ, ವರವು ತಿಪ್ಪೇಸ್ವಾಮಿ, ಜಿಲ್ಲಾ ಮುಖಂಡ ಹಿರೇಹಳ್ಳಿ ಯರ್ರಿಸ್ವಾಮಿ ಮಾತನಾಡಿದರು.
ರೈತ ಮಹಿಳೆ ಭಾರತಮ್ಮ, ಮಲ್ಲಮ್ಮ, ಓಬಮ್ಮ, ತಿಪ್ಪಮ್ಮ, ಪಾಲಮ್ಮ, ಕಾರ್ಯಕರ್ತ ತಿಪ್ಪೇಸ್ವಾಮಿ, ಬಂಡೆ ತಿಪ್ಪೇಸ್ವಾಮಿ, ಮೈರಾಡ ಚಂದ್ರಣ್ಣ, ರಾಜಣ್ಣ, ಜಯಣ್ಣ, ಹನುಮಂತಪ್ಪ, ವೆಂಕಟೇಶ್, ಮಂಜುನಾಥ್, ಚಿಕ್ಕಣ್ಣ, ಪಾಲಯ್ಯ, ಸಣ್ಣ ಪಾಲಯ್ಯ, ರಂಗಪ್ಪ ಇದ್ದರು.