ಮೊಳಕಾಲ್ಮುರು: ತಾಲ್ಲೂಕಿನ ಬಿಜಿಕೆರೆ ಗ್ರಾಮದ ವೀರಭದ್ರಪ್ಪನವರ ತೋಟದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ನೀರಿನ ಟ್ಯಾಂಕರ್ ಲಾರಿಯು ಉರುಳಿಬಿದ್ದಿದ್ದು, ಬಸ್ ಜಖಂಗೊಂಡಿದೆ.
ಘಟನೆ ವಿವರ: ಬುಧವಾರ ಸಂಜೆ ಬಿಜಿಕೆರೆ ಗ್ರಾಮದ ಸಮೀಪದಲ್ಲಿ ಹೆದ್ದಾರಿಯ ಡಿವೈಡರ್ ಮೇಲಿರುವ ಸಸಿಗಳಿಗೆ ನೀರುಣಿಸಲು ರಸ್ತೆಯ ಒಂದು ಬದಿಯಲ್ಲಿ ಕಡಿಮೆ ವೇಗದಲ್ಲಿ ನೀರು ತುಂಬಿದ ಟ್ಯಾಂಕರ್ ಲಾರಿಯು ಸಾಗುತ್ತಿತ್ತು. ಬಳ್ಳಾರಿಯಿಂದ ಬೆಂಗಳೂರಿನ ಕಡೆಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸೊಂದು ವೇಗವಾಗಿ ಬಂದು ಟ್ಯಾಂಕರ್ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯು ರಸ್ತೆ ಮಧ್ಯೆದಲ್ಲಿ ಉರುಳಿಬಿದ್ದಿದೆ. ಬಸ್ ಮುಂಬದಿಯು ಒಂದು ಭಾಗ ಜಖಂಗೊಂಡಿದೆ. ಘಟನೆಯಲ್ಲಿ 5 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೊಳಕಾಲ್ಮುರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಕೆಎಸ್ಆರ್ಟಿಸಿ ಬಸ್ ಚಾಲಕ ಪರಶುರಾಂ ಅವರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮೊಳಕಾಲ್ಮುರು ಪೊಲೀಸ್ ವೃತ್ತ ನಿರೀಕ್ಷಕ ವಸಂತ ಆಸೋದೆ, ಪಿಎಸ್ಐ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲಿಸಿ, ರಸ್ತೆಯ ಮೇಲೆ ಬಿದ್ದಿದ್ದ ಟ್ಯಾಂಕರ್ ಲಾರಿಯನ್ನು ಕ್ರೈನ್ ಮೂಲಕ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡುಕೊಟ್ಟರು. ಮೊಳಕಾಲ್ಮುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.