ಚಳ್ಳಕೆರೆ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಿಇಟಿಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಪ್ರಾಂಶುಪಾಲ ಎಂ.ರವೀಶ್ ಉಪನ್ಯಾಸಕರಿಗೆ ಸಲಹೆ ನೀಡಿದರು.
ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ವಿಭಾಗದ ಉಪನ್ಯಾಸಕರ ಸಿಇಟಿ ವಿದ್ಯಾರ್ಥಿ ಮಿತ್ರ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಮಾಹಿತಿ ಕೊರತೆ ಮತ್ತು ಆರ್ಥಿಕ ತೊಂದರೆಯ ಕಾರಣ ಬಡ ಕುಟುಂಬದ ವಿಜ್ಞಾನ ವಿಷಯದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವುದಿಲ್ಲ. ಹೀಗಾಗಿ, ಪರೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು 15 ದಿನಗಳಿಗೊಮ್ಮೆ ಪ್ರತಿ ಹೋಬಳಿಯಲ್ಲಿ ಸಿಇಟಿ ಪರೀಕ್ಷಾ ಮಾಹಿತಿ ಮತ್ತು ಅರಿವು ಕಾರ್ಯಕ್ರಮವನ್ನು ತಪ್ಪದೇ ನಡೆಸಬೇಕು’ ಎಂದು ಹೇಳಿದರು.
‘ವಿಜ್ಞಾನದ ವಿದ್ಯಾರ್ಥಿಗಳನ್ನು ಪಿಯು ನಂತರ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಮೀನುಗಾರಿಕೆ ಮುಂತಾದ ಕೋರ್ಸ್ಗಳ ಪ್ರವೇಶಕ್ಕೆ ಸಿಇಟಿ ರ್ಯಾಂಕ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗಾಗಿ, ಸಿಇಟಿ ಹಾಗೂ ಯಾವುದೇ ಪರೀಕ್ಷೆಯನ್ನು ಉದಾಸೀನ ಮಾಡದೆ ಆರಂಭದಿಂದಲೇ ಶ್ರದ್ಧೆ, ಪರಿಶ್ರಮದಿಂದ ಓದಬೇಕು. ಅನುಭವಿ ಉಪನ್ಯಾಸಕರ ಮಾರ್ಗದರ್ಶನದಿಂದ ಉತ್ತಮ ರೀತಿಯಲ್ಲಿ ಪರೀಕ್ಷೆ ಪಾಸು ಮಾಡಬೇಕು’ ಎಂದು ಕನ್ನಡ ವಿಭಾಗದ ಮುಖ್ಯಸ್ಥ ವಸಂತಕುಮಾರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಿಇಟಿ ಎಂದರೆ ಭಯ, ಆತಂಕಕ್ಕೆ ಒಳಗಾಗಬಾರದು. ಅದು ಕಠಿಣ ಪರೀಕ್ಷೆ ಅಲ್ಲ. ಉತ್ಸಾಹ, ಲವಲವಿಕೆಯಿಂದ ಸತತ ಅಭ್ಯಾಸ ನಡೆಸಬೇಕು. ಕಠಿಣ ವಿಷಯವನ್ನು ಉಪನ್ಯಾಸಕರು ಸರಳೀಕರಿಸಿ ಬೋಧಿಸಬೇಕು. ಇದರಿಂದ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಸುಲಭವಾಗುತ್ತದೆ’ ಎಂದು ಸಿಇಟಿ ಮಾಸ್ಟರ್ಟ್ರೈನರ್ ಬಿ.ಶಾಂತಕುಮಾರಿ ಹೇಳಿದರು.