ಹಿರಿಯೂರು: ಹಂದಿಗಳ ವಿರುದ್ಧ ಕಾರ್ಯಾಚರಣೆಗೆ ತೊಡಗಿದ್ದ ಪುರಸಭೆಯ ನೌಕರರ ಮೇಲೆ ಹಂದಿ ಮಾಲೀಕರು ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಲು ಮುಂದಾದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.
ನಿರಂತರ ಒತ್ತಾಯಕ್ಕೆ ಮಣಿದು ಪುರಸಭೆ ಶನಿವಾರ ಹಂದಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಹಂದಿಗಳನ್ನು ಹೊಡೆದು ಸಾಯಿಸುತ್ತಿದ್ದ ಪುರಸಭೆ ಸಿಬ್ಬಂದಿ ವಿರುದ್ಧ ಹಂದಿ ಮಾಲೀಕರು ಹಾಗೂ ಅವರ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ.
ಹಂದಿ ಮಾಲೀಕರ ದೌರ್ಜನ್ಯವನ್ನು ಖಂಡಿಸಿ ಪೌರಸೇವಾ ಸಿಬ್ಬಂದಿ ತಮಗೆ ನೀಡಿದ ದೂರಿನನ್ವಯ ಪುರಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಂದಿ ಮಾಲೀಕರು ಮತ್ತು ಪುರಸಭಾ ಸದಸ್ಯರ ತುರ್ತುಸಭೆ ನಡೆಸಲಾಯಿತು ಎಂದು ಮುಖ್ಯಾಧಿಕಾರಿ ಚಂದ್ರಶೇಖರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಂದಿ ಮಾಲೀಕರು ಇನ್ನು ಮುಂದೆ ಈ ರೀತಿ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಜತೆಗೆ, ಒಂದು ತಿಂಗಳ ಒಳಗೆ ಹಂದಿಗಳನ್ನು ನಗರ ಪ್ರದೇಶದಿಂದ ಹೊರಭಾಗಕ್ಕೆ ಸಾಗಿಸುವುದಾಗಿ ತಿಳಿಸಿದ್ದಾರೆ. ಹಿಂದೆಯೂ ಇದೇರೀತಿ ಭರವಸೆ ನೀಡಿದ್ದ ಅವರು, ತಮ್ಮ ಮಾತಿನಂತೆ ನಡೆದುಕೊಂಡಿರಲಿಲ್ಲ.
ಈಗ ಒಂದು ತಿಂಗಳಲ್ಲಿ ಹಂದಿಗಳನ್ನು ಹೊರಗೆ ಒಯ್ಯದಿದ್ದರೆ ಕಠಿಣಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಅಧ್ಯಕ್ಷೆ ಮಂಜುಳಾ ವೆಂಕಟೇಶ್ ಮಾತನಾಡಿ, ಹಂದಿಗಳ ಹಾವಳಿ ಕುರಿತಂತೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿವೆ. ಪುರಸಭೆ ಕೈಕಟ್ಟಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ನಗರದಲ್ಲಿ ಕಾರ್ಯ ನಿರ್ವಹಿಸುವ ಪೌರ ಸಿಬ್ಬಂದಿಗೆ ರಕ್ಷಣೆ ಕೊಡಬೇಕು. ಅಧಿಕಾರಿಗಳು ನೀಡುವ ಆದೇಶ ಅಥವಾ ಸೂಚನೆಯನ್ನು ಪಾಲಿಸುವುದು ಮಾತ್ರ ತಮ್ಮ ಕೆಲಸ. ಆದರೆ, ಸಾರ್ವಜನಿಕರು ತಮ್ಮ ಮೇಲೆ ಹಲ್ಲೆ ನಡೆಸಲು ಬಂದರೆ ಹೇಗೆ ಎಂದು ನೌಕರರು ಪ್ರಶ್ನೆ ಮಾಡಿದ್ದಾರೆ.