ಚಿತ್ರದುರ್ಗ: ನಾವಿಂದು ತಂತ್ರಜ್ಞಾನದ ಮುಂಚೂಣಿಯಲ್ಲಿ ಇದ್ದೇವೆ. ಆದರೆ, ತತ್ವಗಳ ಆಧಾರದ ಮೇಲೆ ತಂತ್ರಜ್ಞಾನ ಬೆಳೆಸುವಲ್ಲಿ ಸೋತಿದ್ದೇವೆ ಎಂದು ಎಸ್ಜೆಎಂ ವಿದ್ಯಾಪೀಠದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು.
ನಗರದ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ `ಸ್ಛೂರ್ತಿ- 2013' ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.
ಸನ್ನಡತೆ, ಸನ್ಮಾರ್ಗದಲ್ಲಿ ನಡೆಯಲು ಹಿರಿಯ ದಾರ್ಶನಿಕರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಓದಬೇಕು. ವಿಜ್ಞಾನಿಗಳು, ಸಾಧಕರ ಸಾಧನೆಗಳ ಬಗ್ಗೆ ತಿಳಿಯುವ ಮೂಲಕ ತಮ್ಮ ಗುರಿ ನಿರ್ಧರಿಸಲು ಸಾಧ್ಯ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈಸೂರು ವಲಯದ ವಿಶೇಷಾಧಿಕಾರಿಗಳಾದ ಡಾ.ಬಿ. ಮಂಜು ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆಧುನಿಕ ತಂತ್ರಜ್ಞಾನದ ಉಪಯೋಗವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುತ್ತದೆ. ವಿದ್ಯಾರ್ಥಿಗಳು ಅಗತ್ಯವಿರುವ ದಾಖಲೆಗಳನ್ನು ಇ- ಮೇಲ್ ಮೂಲಕ ಕ್ಷಣಮಾತ್ರದಲ್ಲಿ ಪಡೆಯಬಹುದು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ 196 ಕಾಲೇಜುಗಳು ಮಾನ್ಯತೆ ಪಡೆದಿದ್ದು, ಭಾರತದ ಅತ್ಯಂತ ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯ ಇದಾಗಿದ್ದು. ದಕ್ಷ ಮತ್ತು ಪರಿಣಾಮಕಾರಿ ಆಡಳಿತದ ಜತೆಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು.
ಪ್ರಾಂಶುಪಾಲ ಡಾ.ಎಸ್.ಬಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. `ಜೆಮಿನಿಟೆಕ್-2013' ಸಂಚಿಕೆ ಬಿಡುಗಡೆ ಮಾಡಲಾಯಿತು. ಸ್ಫೂರ್ತಿ-2013ರ ಪ್ರಧಾನ ಸಂಯೋಜಕ ಪ್ರೊ.ಕೆ.ಸಿ. ರೇವಣಸಿದ್ದಪ್ಪ, ವಿದ್ಯಾರ್ಥಿ ಸಂಯೋಜಕ ಸಂದೀಪ್, ಪ್ರಿಯಾಂಕಾ , ಧರಣಿ ಕಂಪೆನಿಯ ಡಿ.ಆರ್. ಗುರುರಾಜ್, ಉದಯ್ ಉಪಸ್ಥಿತರಿದ್ದರು. ಅನುಷಾ ಪ್ರಾರ್ಥಿಸಿದರು. ಕೆ.ಸಿ. ಪೂಜಾ ಸ್ವಾಗತಿಸಿದರು. ಶ್ವೇತಾ ವಂದಿಸಿದರು. ಎಸ್. ಯೋಗೀಶ್ ಮತ್ತು ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.