ಚಿಕ್ಕಜಾಜೂರು: ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಸೇತುವೆ ಕೊಚ್ಚಿಕೊಂಡು ಹೋಗಿ ಜನರು ಪರದಾಡುವಂತಾಗಿದೆ.
ಸಮೀಪದ ಗುಲಗಂಜಿಹಟ್ಟಿ ಗ್ರಾಮಕ್ಕೆ ಬಿ.ದುರ್ಗದಿಂದ ಹೋಗುವ ಮಾರ್ಗದಲ್ಲಿ ಮೂರು ವರ್ಷಗಳ ಹಿಂದೆ ಬಿ.ದುರ್ಗ ಕೆರೆಯಿಂದ ಬರುವ ಹಳ್ಳಕ್ಕೆ ಸೇತುವೆ ನಿರ್ಮಿಸಿ, ರಸ್ತೆ ಸಂಪರ್ಕವನ್ನು ಕಲ್ಪಿಸಲಾಗಿತ್ತು.
ಆದರೆ, ಅದೇ ವರ್ಷ ದೀಪಾವಳಿಯಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಕಳಪೆ ಕಾಮಗಾರಿಯಲ್ಲಿ ನಿರ್ಮಾಣವಾಗಿದ್ದ ಸೇತುವೆ ಮೇಲೆ ನಿರ್ಮಿಸಿದ್ದ ರಸ್ತೆ ಹಾಳಾಗಿತ್ತು. ಹಲವು ಬಾರಿ ರಸ್ತೆ ದುರಸ್ತಿಗೆ ಮನವಿ ಮಾಡಿದ್ದರೂ, ದುರಸ್ತಿ ಕಾರ್ಯ ಮರೀಚಿಕೆಯಾಗಿದೆ.
ಆದರೂ, ಪಕ್ಕದ ಹೊಲದ ಮಾರ್ಗವಾಗಿ ಮಕ್ಕಳು ಶಾಲಾ–ಕಾಲೇಜಿಗೆ ಹೋಗುತ್ತಿದ್ದರು. ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿದು ಹೋಗಿದ್ದು, ಶಾಲೆಗೆ ಹೋಗಲು ಮಕ್ಕಳು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮದ ಮಂಜಾನಾಯ್ಕ,
ಡಿ.ಆನಂದ್, ಆನಂದ್,ಸುರೇಶ್, ಸಂತೋಷ್ ಹೇಳಿದ್ದಾರೆ.