ಮಂಗಳೂರು: 'ಜೀವಕೋಶಗಳಲ್ಲಿರುವ ರೋಬೊಸೋಮ್ಗಳು ಹಸಿವೆ, ತೀವ್ರ ಚಳಿ ಇತ್ಯಾದಿ ಒತ್ತಡದ ಅವಧಿ ಯಲ್ಲಿ ಶಿಸ್ತುಬದ್ಧವಾಗಿ ಕೋಶ ಗಳ ಒಳಭಾಗದಲ್ಲಿ ಮುದುಡಿ ಸೇರಿ ಕೊಂಡು ಸ್ಥಿರವಾಗಿರುತ್ತವೆ' ಎಂದು 2009 ನೇ ಸಾಲಿನಲ್ಲಿ ರಸಾಯನ ವಿಜ್ಞಾನದ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಇಸ್ರೇಲಿನ ಡಾ. ಅಡಾ. ಇ. ಯೊನಾಥ್ ಹೇಳಿದ್ದಾರೆ.
ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ 5 ದಿನಗಳ ‘ಸಹ್ಯಾದ್ರಿ ಸಮಾವೇಶ’ದಲ್ಲಿ ಮಂಗಳವಾರ ಅವರು ರೋಬೊ ಸೋಮ್ ಕುರಿತ ಉಪನ್ಯಾಸ ನೀಡಿದರು.
‘ಎಕ್ಸ್ ರೇ ಗಳಿಂದ ರೋಬೊ ಸೋಮ್ಗಳಿಗೆ ಹಾನಿಯಾಗುತ್ತದೆ, ಅದೇ ರೀತಿ ಆಂಟಿಬಯೋಟಿಕ್ ಗಳೂ ಅವುಗಳನ್ನು ಘಾಸಿ ಮಾಡುತ್ತವೆ ಎಂದರು. ಉತ್ತರ ಧ್ರುವದಲ್ಲಿ ವಾಸಿಸುವ ಬಿಳಿ ಕರಡಿಗಳು ಚಳಿಗಾಲದಲ್ಲಿ 6 ತಿಂಗಳುಗಳ ಕಾಲ ದೀರ್ಘ ನಿದ್ರೆಗೆ ಹೋಗುತ್ತವೆ. ಈ ಅವಧಿಯಲ್ಲಿ ಅವುಗಳು ಆಹಾರ ಸೇವಿಸುವುದಿಲ್ಲ. ಆಗ ಅವುಗಳ ರೋಬೊಸೋಮ್ ಕೋಶದ ಒಳಭಾಗದಲ್ಲಿ ಸೇರಿ ಕೊಂಡು ಹರಳುಗಟ್ಟುತ್ತವೆ ಮತ್ತು ಸ್ಥಿರವಾಗಿರುತ್ತವೆ. ಆ ಪ್ರಾಣಿಗಳು ನಿದ್ದೆಯಿಂದೆದ್ದ ಬಳಿಕ ರೋಬೊಸೋಮ್ಗಳು ಕ್ರಿಯಾ ಶೀಲವಾಗಿ ಪ್ರೊಟೀನು ತಯಾರಿಸುತ್ತವೆ ಎಂದರು.
ತೀರಾ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಜೀವಿಗಳಿರುತ್ತವೆ. ಮೃತ ಸಮುದ್ರದಲ್ಲೂ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ರೋಬೊಸೋಮ್ ಪ್ರೊಟೀನ್ ತಯಾರಿ ಸುವ ಕಾರ್ಖಾನೆಗಳಂತೆ. ಅವುಗಳು ವಂಶವಾಹಿಗಳಾದ ಜೀನ್ ಗಳಲ್ಲಿಯ ಮಾಹಿತಿಯನ್ನು ಆಧರಿಸಿ ಸತತವಾಗಿ ಪ್ರೊಟೀನುಗಳನ್ನು ಉತ್ಪಾದಿಸುತ್ತವೆ. ಡಿ.ಎನ್.ಎ. ಎನ್ನುವುದು 4 ಅಕ್ಷರಗಳ ಮೂಲಕ ಮಾಹಿತಿಗಳನ್ನು ಒಳಗೊಂಡಿರುವ ಖಜಾನೆಯಾಗಿದೆ. ಇವುಗಳು ರಾಸಾ ಯನಿಕ ಅಕ್ಷರಗಳು. ರೋಬೊಸೋಮ್ ಪ್ರೊಟೀನ್ ತಯಾರಿಸದಿದ್ದರೆ ಕಣ್ಣಿನಲ್ಲಿ ಧೂಳು ಬಿದ್ದಾಗ ಕಣ್ಣೀರು ಸುರಿಯುವುದೂ ನಿಂತು ಹೋಗುತ್ತದೆ ಎಂದವರು ಹೇಳಿದರು.
'ವಿಜ್ಞಾನ ಕ್ಷೇತ್ರ ಪುರುಷರ ಪಾರಮ್ಯದಲ್ಲಿದ್ದಾಗ ಮೇಡಂ ಕ್ಯೂರಿ ಈ ಕ್ಷೇತ್ರಕ್ಕೆ ಬಂದು ಸಾಧನೆ ಮಾಡಿ ನೊಬೆಲ್ ಪಡೆದರು. ನಾನೂ ಅದೇ ಹಾದಿಯಲ್ಲಿ ಸಾಗಿದೆ. ನಾನೇನು ಬುದ್ಧಿವಂತ ವಿದ್ಯಾರ್ಥಿನಿಯಾಗಿರಲಿಲ್ಲ, ಆದರೆ ಕುತೂಹಲ ಮತ್ತು ಹಟ ನನ್ನನ್ನು ಬೆಳೆಸಿತು' ಎಂದರು.
ಸಹ್ಯಾದ್ರಿ ಪ್ರತಿಷ್ಠಾನದ ಅಧ್ಯಕ್ಷರಾದ ಮಂಜುನಾಥ ಭಂಡಾರಿ, ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಿ.ಪಿ. ಅಗರ್ವಾಲ್ , ಡಾ. ಶಂಕರ ಕೆ. ಪ್ರಸಾದ್ ಮಾತನಾಡಿದರು.
ಸ್ಕೂಟರ್ ಅಪಘಾತ ಮೂಡಿಸಿದ ಆಸಕ್ತಿ
ಸ್ಕೂಟರ್ ಅಪಘಾತದಲ್ಲಿ ಬಿದ್ದು ತಮ್ಮ ತಲೆಗೆ ಪೆಟ್ಟಾಯಿತು. ಆ ಕಾಲದಲ್ಲಿ ಹೆಲ್ಮೆಟುಗಳು ಇರಲಿಲ್ಲ. ಇದರಿಂದಾಗಿ ಹಲವು ತಿಂಗಳುಗಳ ಕಾಲ ಮನೆಯಲ್ಲಿ ಉಳಿಯಬೇಕಾಯಿತು. ಆ ಸಂಧರ್ಭದಲ್ಲಿ ಉತ್ತರ ಧ್ರುವದ ಬಿಳಿ ಕರಡಿಗಳ ಕುರಿತು ಓದಿದೆ.
ಅಲ್ಲಿಯವರೆಗೂ ನನಗೆ ಅವುಗಳ ಬಗ್ಗೆ ಆಸಕ್ತಿ ಇರಲಿಲ್ಲ. ಈ ಕರಡಿಗಳು ಆರು ತಿಂಗಳು ಕಾಲ ಆಹಾರವಿಲ್ಲದೆ, ಪ್ರೊಟೀನು ತಯಾರಿಕೆಯನ್ನು ಹೇಗೆ ಸ್ಥಗಿತಗೊಳಿಸುತ್ತವೆ ಎಂಬ ಸಂಶೋಧನೆಯನ್ನು ಕೈಗೆತ್ತಿಕೊಂಡೆ ಎನ್ನುತ್ತ ಡಾ. ಅಡಾ ತಾವು ಬಿಳಿ ಕರಡಿಗಳ ಕುರಿತು ಮಾಹಿತಿ ಸಂಗ್ರಹಕ್ಕೆ ಕಾರಣವಾದ ಘಟನೆಯನ್ನು ಸ್ಮರಿಸಿಕೊಂಡರು.
* *
ರೋಬೊಸೋಮ್ಗಳಿಗೆ ಘಾಸಿ ಮಾಡದೇ, ಕಾಯಿಲೆಗಳಿಗೆ ಔಷಧಿ ತಯಾರಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿದೆ.
ಡಾ. ಅಡಾ. ಇ. ಯೊನಾಥ್, ವಿಜ್ಞಾನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.