ಬಂಟ್ವಾಳ: ಇಲ್ಲಿನ ಬಂಟ್ವಾಳ-ಮೂಡುಬಿದಿರೆ ಮುಖ್ಯರಸ್ತೆ ನಡುವಿನ ರಾಯಿ ಸಮೀಪದ ಕಂಗಿತ್ಲು ಎಂಬಲ್ಲಿ ಡಸ್ಟರ್ ಕಾರಿನಲ್ಲಿ ಸೋಮವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಆ ವಾಹನವು ಸುಟ್ಟು ಕರಕಲಾಗಿದೆ.
ಏಳಿಂಜೆ ನಿವಾಸಿ ಶರತ್ ಶೆಟ್ಟಿ ಎಂಬವರು ಬಂಟ್ವಾಳ ಕಡೆಯಿಂದ ಮೂಡುಬಿದಿರೆಗೆ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. 'ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಾರಿನ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಕಾರಿನಲ್ಲಿದ್ದ ಮಗು ಸಹಿತ ನಾಲ್ವರು ಪ್ರಯಾಣಿಕರು ಅಪಾಯದ ಮುನ್ಸೂಚನೆ ಸಿಕ್ಕ ತಕ್ಷಣವೇ ಕೆಳಗೆ ಇಳಿದಿದ್ದರು."
‘ಸ್ಥಳೀಯರು ಮತ್ತು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ನೀರು ಹಾಯಿಸಿ ಬೆಂಕಿ ನಂದಿಸಿದರು. ಆದರೆ, ಅಷ್ಟರಲ್ಲಿ ಕಾರು ಸುಟ್ಟು ಕರಕಲಾಗಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.