ಬೆಂಗಳೂರು: 'ಮೈಸೂರು–ಕೊಡಗು–ತಲಚೇರಿ ಮಾರ್ಗದ ರೈಲು ಯೋಜನೆಯು ಕರ್ನಾಟಕ ಮತ್ತು ಕೇರಳ ರಾಜ್ಯಗಳ ತೀರ್ಮಾನಕ್ಕೆ ಬಿಟ್ಟ ವಿಚಾರ. ಇದರಲ್ಲಿ ರೈಲ್ವೆ ಇಲಾಖೆ ಮಧ್ಯಪ್ರವೇಶಿಸುವುದಿಲ್ಲ’ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಸ್ಪಷ್ಟಪಡಿಸಿದರು.
ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯೋಜನೆ ನಮ್ಮ ಪ್ರಸ್ತಾವವಲ್ಲ. ಇದು ಕೇರಳ ರಾಜ್ಯ ಸರ್ಕಾರದ ಪ್ರಸ್ತಾವ. ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಿ, ರೈಲು ಮಾರ್ಗ ನಿರ್ಮಿಸಬೇಕೆನ್ನುವ ಕೋರಿಕೆ ಸಲ್ಲಿಸಿತ್ತು. ಪರಿಸರ ಬಲಿಕೊಟ್ಟು ಯೋಜನೆ ಜಾರಿಗೊಳಿಸಲು ನಾವೂ ಸಿದ್ಧವಿಲ್ಲ’ ಎಂದರು.
‘ಈ ಮಾರ್ಗಕ್ಕೆ ಕೇಂದ್ರ ಸಚಿವ ಅನಂತಕುಮಾರ್ ನೇತೃತ್ವದ ರಾಜ್ಯದ ನಿಯೋಗ ವಿರೋಧ ವ್ಯಕ್ತಪಡಿಸಿದೆ. ಪರಿಸರ ಸೂಕ್ಷ್ಮ ಪ್ರದೇಶ ಮತ್ತು ವನ್ಯಜೀವಿ ಪ್ರದೇಶದಲ್ಲಿ ರೈಲು ಮಾರ್ಗ ಹಾದು ಹೋಗುವುದರಿಂದ ಪರಿಸರಕ್ಕೆ ಭಾರಿ ಹಾನಿಯಾಗುವುದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ’ ಎಂದು ತಿಳಿಸಿದರು.