ಉಳ್ಳಾಲ (ದಕ್ಷಿಣ ಕನ್ನಡ): ಕೆಲ ದಿನಗಳಿಂದ ಸುರಿಯುತ್ತಿರುವ ಗಾಳಿ–ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ದೊಡ್ಡ ಅಲೆಗಳು ದಡಕ್ಕಪ್ಪಳಿಸುತ್ತಿವೆ. ಮೊಗವೀರಪಟ್ಟಣದಲ್ಲಿ ಮೀನುಗಾರಿಕೆಗೆ ಹಾಕಿದ್ದ ಬಲೆ ಕಡಲ್ಕೊರೆತದ ಶಾಶ್ವತ ಕಾಮಗಾರಿಯ ಕಲ್ಲಿಗೆ ಸಿಲುಕಿ ಹಾನಿಯಾಗಿದೆ.
ಸ್ಥಳೀಯ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಕೆಲವು ದೋಣಿಗಳು ಸಮುದ್ರದ ಅಲೆಗಳ ಕಾರಣದಿಂದ ದಡಕ್ಕೆ ತಲುಪಲು ಅಲೆ ಕಡಿಮೆಯಾಗುವವರೆಗೆ ಕಾಯಬೇಕಾಯಿತು. ಮೊಗವೀರಪಟ್ಣದಲ್ಲಿ ಅಶ್ವಿನ್ ಅವರು ಸಮುದ್ರದಲ್ಲಿ ಮೀನಿಗಾಗಿ ಬೀಸಿದ್ದ ಬಲೆ ಸಮುದ್ರದ ಅಲೆಗೆ ಸಿಲುಕಿ ದಡಕ್ಕೆ ಬಂದಿದ್ದು, ಸುಮಾರು ₹ 10 ಸಾವಿರ ನಷ್ಟವಾಗಿದೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ–ಮಳೆಗೆ ಉಳ್ಳಾಲದಲ್ಲಿ ಸಮುದ್ರವೂ ಪ್ರಕ್ಷುಬ್ಧಗೊಂಡಿದ್ದು ದೊಡ್ಡ ಅಲೆಗಳು ದಡಕ್ಕಪ್ಪಳಿಸುತ್ತಿವೆ