ಬೆಳ್ತಂಗಡಿ: ‘ಇಂದು ಸೈನ್ಯದಲ್ಲಿ ಉತ್ತಮ ಸೌಲಭ್ಯಗಳಿದ್ದು, ಯುವ ಸಮುದಾಯ ದೇಶ ಸೇವೆಮಾಡಲು ಸೈನ್ಯಕ್ಕೆ ಸೇರುವ ಸಂಕಲ್ಪ ಮಾಡಬೇಕು. ಭಾರತೀಯ ನೆಲದಲ್ಲಿ ಸಿಗುವ ಯಾವುದೇ ವೃತ್ತಿಯನ್ನಾದರೂ ಮಾಡುವಾಗ ಪ್ರಾಮಾಣಿಕತೆಯಿಂದ ಮಾಡಿದರೆ ಅದೂ ದೇಶಸೇವೆಗೆ ಸಮಾನವಾದುದು’ ಎಂದು ನಿವೃತ್ತ ಯೋಧ ಸುಬೇದಾರ್ ಮೇಜರ್ ಶಿವಕುಮಾರ್ ಹೇಳಿದರು.
28 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಊರಿಗೆ ಬಂದ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘18ನೇ ವಯಸ್ಸಿನಲ್ಲಿ ಸೈನ್ಯ ಸೇರಬೇಕು ಎಂಬ ಕನಸಿತ್ತು. ಆಗ ಉದ್ಯೋಗ ವಿನಿಮಯ ಕೇಂದ್ರದಿಂದ ಬಂದ ಮಾಹಿತಿಯಂತೆ ಸಂದರ್ಶನಕ್ಕೆ ಹೋಗಿದ್ದೆ. ಅಲ್ಲಿ 2500 ಅಭ್ಯರ್ಥಿಗಳಲ್ಲಿ 9 ಮಂದಿ ಆಯ್ಕೆಯಾಗಿದ್ದು, ಅದರಲ್ಲಿ ನಾನೂ ಒಬ್ಬನಾದೆ. ಸೈನ್ಯಕ್ಕೆ ಸೇರಿದ ಕೆಲವೇ ಸಮಯದಲ್ಲಿ ಯುದ್ಧಗಳಲ್ಲಿ ಹೋರಾಡಲು ಅವಕಾಶ ಸಿಕ್ಕಿದವು. ಬಳಿಕ ಬೇರೆ ಕಠಿಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ನಿವೃತ್ತ ಯೋಧರಿಗೆ ಕೊಡುವ ಗೌರವ ನೋಡಿದಾಗ ಪ್ರತಿಯೊಬ್ಬರಲ್ಲೂ ದೇಶ ಪ್ರೇಮ ಎಷ್ಟಿದೆ ಎಂದು ಕಾಣಬಹುದು’ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿದರು.
ಶಾಸಕ ಹರೀಶ್ ಪೂಂಜ, ನಿವೃತ್ತ ಸೈನಿಕರ ಸಂಘದ ಸ್ಥಾಪಕಾದ್ಯಕ್ಷ ಸುನಿಲ್ ಶೆಣೈ, ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಪಿಕ್, ಶಿವಕುಮಾರ್ ತಾಯಿ ಸುಂದರಿ, ಪತ್ನಿ ಜಯಶ್ರಿ, ಸಹೋದರ ಹರೀಶ್, ಲಾಯಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಅರವಿಂದ, ಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು.