ಬೆಳ್ತಂಗಡಿ: ‘ಒಂದು ಕಾಲಘಟ್ಟದಲ್ಲಿ ವಿದೇಶದಿಂದ ಯುದ್ಧೋಪಕರಣ ಆಮದು ಮಾಡುತ್ತಿದ್ದೆವು. ಆದರೆ, ಇಂದು ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳನ್ನು ರಫ್ತು ಮಾಡುವ ಮೂಲಕ ಭಾರತದ ಶಕ್ತಿ ವಿಶ್ವಕ್ಕೇ ಪರಿಚಿತವಾಗುತ್ತಿದೆ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲ್ಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ಧ್ವಜಾರೋಹಣ ನಡೆಸಿದರು.
ನಿವೃತ್ತ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಪ್ರಧಾನ ಭಾಷಣ ಮಾಡಿದರು.
ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅವರ ಸಂದೇಶವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ವಿರೂಪಾಕ್ಷಪ್ಪ ವಾಚಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಕೆ. ದೇಶ ಭಕ್ತಿ ಗೀತೆ ಹಾಡಿದರು.
ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಸಿಡಿಪಿಒ ಪ್ರಿಯಾ ಆಗ್ನೆಸ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ., ಮೆಸ್ಕಾಂ ಎಇಇ ಶಿವಶಂಕರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ್ ಕೆ.ಎಸ್., ತಾರಕೇಸರಿ, ಜೋಸೆಫ್, ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಇದ್ದರು.
ತಾಲ್ಲೂಕು ಪಂಚಾಯಿತಿ ಇಒ ಕುಸುಮಾಧರ್ ಸ್ವಾಗತಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮ ಸಂಯೋಜಕ ಜಯಾನಂದ ವಂದಿಸಿದರು. ಸಿಆರ್ಪಿ ವಾರಿಜಾ ಸೋಮಶೇಖರ್, ರಾಜೇಶ್ ನಿರೂಪಿಸಿದರು.
ಸಂಭ್ರಮದ ಮೆರವಣಿಗೆ ನಡೆಯಿತು. ಬಳಿಕ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತೋಟಗಾರಿಕೆ ಇಲಾಖೆಯಿಂದ ತಾಳೆ ಬೆಳೆ ನಾಟಿ ಆಂದೋಲನ ಕಾರ್ಯಕ್ರಮದ ಅಂಗವಾಗಿ ರೈತರಿಗೆ ಗಿಡ ವಿತರಿಸಲಾಯಿತು.