ಪುತ್ತೂರು: ‘ಪ್ರೇಮ ಸಂಬಂಧ ಬಹಿರಂಗಗೊಂಡರೆ ಅಪಮಾನ ಅಗುತ್ತದೆ’ ಎಂದು ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ನಡೆದಿದೆ.
ಈಶ್ವರಮಂಗಲ ಸಮೀಪದ ಕತ್ರಿಬೈಲು ನಿವಾಸಿ ನಾರಾಯಣ ಮುಖಾರಿ ಅವರ ಪುತ್ರ ಪ್ರಶಾಂತ್ ಮುಖಾರಿ (38) ಆತ್ಮಹತ್ಯೆ ಮಾಡಿಕೊಂಡವರು.
ಪ್ರಶಾಂತ್ ಅವರು ಶನಿವಾರ ಮಧ್ಯಾಹ್ನದ ವೇಳೆ ತನ್ನ ಪತ್ನಿಯ ಸಹೋದರನಿಗೆ ‘ನನ್ನಿಂದ ತಪ್ಪಾಗಿದೆ. ನಾನು ಇನ್ನೊಬ್ಬಳನ್ನು ಪ್ರೀತಿಸುತ್ತಿರುವ ವಿಚಾರ ಮನೆಯವರಿಗೂ ಗೊತ್ತಾಗಿದೆ. ಈ ವಿಚಾರ ಬಹಿರಂಗಗೊಂಡರೆ ಅಪಮಾನಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ನಾನು ಚಿಮುಣಿಗುಡ್ಡೆ ಎಂಬಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಬಿಡಿ’ ಎಂದು ಮೊಬೈಲ್ ಮೂಲಕ ಧ್ವನಿ ಸಂದೇಶ ಕಳುಹಿಸಿದ್ದರು. ಇದನ್ನು ಗಮನಿಸಿದ ಅವರು ಹಾಗೂ ಮನೆಯವರು ಹುಡುಕಿಕೊಂಡು ಹೋದಾಗ ಈಶ್ವರಮಂಗಲದ ಪುಳಿತ್ತಡಿ ಬಳಿಯಿಂದ ಚಿಮುಣಿಗುಡ್ಡೆಗೆ ಹೋಗುವ ರಸ್ತೆ ಪಕ್ಕದ ಮರದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪ್ರಶಾಂತ್ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರದ ವ್ಯಾಪಾರ, ಮರದ ಕೆಲಸ, ಮನೆ ನಿರ್ಮಿಸಿಕೊಡುವ ವ್ಯವಹಾರ ನಡೆಸುತ್ತಿದ್ದ ಪ್ರಶಾಂತ್ ಮುಖಾರಿ, ಕತ್ರಿಬೈಲಿನಲ್ಲಿ ಹೊಸ ಮನೆ ನಿರ್ಮಿಸಿ ಕೆಲ ದಿನಗಳ ಹಿಂದೆ ಗೃಹ ಪ್ರವೇಶ ಮಾಡಿದ್ದರು. ಪ್ರಶಾಂತ್ ಅವರಿಗೆ ಪತ್ನಿ ಮತ್ತು ಮಗ ಇದ್ದಾರೆ.
ಈ ನಡುವೆ ಇನ್ನೊಬ್ಬಳು ಯುವತಿಯೊಂದಿಗೆ ಹೊಂದಿದ್ದ ಪ್ರೇಮ ಸಂಬಂಧ ಬಹಿರಂಗಗೊಂಡಿದ್ದರಿಂದ ಅವರು ಅಪಮಾನಗೊಂಡು ಈ ಕೃತ್ಯ ಎಸಗಿರುವುದಾಗಿ ಪ್ರಶಾಂತ್ ಪತ್ನಿ ಶೋಭಾ ಅವರು ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.