ಮಂಗಳೂರು: ಕಟೀಲಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ ಮೂಡುಬಿದಿರೆ ಕುದ್ರಿಪದವು ಬಳಿಯ ದಡ್ಡು ಕೋಡಿಯ ತಿರುವಿನಲ್ಲಿ ಚಲಿಸುವಾಗ ಬಸ್ನಿಂದ ಹೊರಗೆ ಎಸೆಯಲ್ಪಟ್ಟ ವ್ಯಕ್ತಿಯೊಬ್ಬರು ಮಂಗಳವಾರ ಮೃತಪಟ್ಟಿದ್ದು, ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಸ್ಸಿನ ಬದಲಿ ಚಾಲಕ ಪ್ರಸಾದ್ ಕೆ.ಬಿ ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.
‘ಬಿ.ಯಲ್ಲಪ್ಪ ಅವರ ಕುಟುಂಬವು ಬಾಡಿಗೆ ಬಸ್ನಲ್ಲಿ ಪ್ರವಾಸ ಹೊರಟಿತ್ತು. ಸವದತ್ತಿ, ಗೋಕರ್ಣ, ಆನೆಗುಡ್ಡೆ, ಮುರ್ಡೇಶ್ವರ, ಉಡುಪಿ, ಮಲ್ಪೆ ಕಿನಾರೆ ಪ್ರವಾಸ ಮುಗಿಸಿ ಮಂಗಳವಾರ ಮಧ್ಯಾಹ್ನ ಕಟೀಲು ಕ್ಷೇತ್ರವನ್ನು ಸಂದರ್ಶಿಸಿತ್ತು. ಅಲ್ಲಿಂದ ಧರ್ಮಸ್ಥಳದತ್ತ ಹೊರಟಿತ್ತು. ಅವರು ಪ್ರಯಾಣಿಸುವ ಬಸ್ ಮೂರುಕಾವೇರಿ ದಾಟಿ ಮೂಡುಬಿದಿರೆಯತ್ತ ಸಾಗುತ್ತಿತ್ತು. ಪ್ರಸಾದ್ ಕೆ.ಬಿ. ಅವರು ಬಸ್ನ ಹಿಂಬದಿಯ ಬಾಗಿಲಿನ ಬಳಿ ನಿಂತಿದ್ದರು. ಚಾಲಕ ಹಬೀಬ್ ದಿಲ್ ಸಾಬ್ ಕುದ್ರಿಪದವು ಬಳಿಯ ದಡ್ಡು ಕೋಡಿಯ ತಿರುವಿನಲ್ಲಿ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಪ್ರಸಾದ್ ಕೆಳಗೆ ಬಿದ್ದಿದ್ದರು. ಅವರ ಹಣೆಗೆ ಮತ್ತು ಬೆನ್ನಿಗೆ ಗಾಯವಾಗಿತ್ತು. ತಕ್ಷಣ ಅವರನ್ನು ಕಲ್ಲಮುಂಡ್ಕೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಗಾಯಾಳುವನ್ನು ವೆನ್ಲಾಕ್ ಆಸ್ಪತ್ರೆಗೆ ಕರದೊಯ್ಯಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಪ್ರಸಾದ್ ಮೃತಪಟ್ಟಿರುವುದನ್ನು ಖಚಿತಪಡಿಸಿದರು ಎಂದು ಯಲ್ಲಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ‘ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.