ಮಂಗಳೂರು: ಪೆರಿಯಾಲ್ತಡ್ಕ ಚರ್ಚ್ನ ಧರ್ಮಗುರುವಿನಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ವೃದ್ಧ ದಂಪತಿ ಗ್ರೆಗರಿ ಮೊಂತೆರೊ– ಫಿಲೋಮಿನಾ ಕೊವೆಲ್ಲೊ ಅವರು ತಮಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಇದರಿಂದ ನಮಗೆ ನಿರಾಸೆಯಾಗಿದೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯವು ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.
ಗ್ರೆಗರಿ, ‘ನಮ್ಮ ವಾರ್ಡ್ ಮತ್ತು ಚರ್ಚ್ನ ವಾಟ್ಸ್ಆ್ಯಪ್ ಗುಂಪಿನಿಂದ ಹೊರಹಾಕಲಾಗಿದೆ’ ಎಂದು ಆರೋಪಿಸಿದರು.
‘ಹಲ್ಲೆ ಸಂಬಂಧ ನಾವು ಪ್ರಕರಣ ದಾಖಲಿಸಿದ ಬಳಿಕ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಯವರು ನಮ್ಮ ಮನೆಗೆ ಮಂಗಳೂರು ಕಥೋಲಿಕ್ ಸಭಾ ಸದಸ್ಯರ ಜೊತೆ ಭೇಟಿ ನೀಡಿದರು’ ಎಂದರು.
ಹಲ್ಲೆ ಸಂಬಂಧ ಪ್ರಕರಣ ದಾಖಲಿಸಲು ವೃದ್ಧ ದಂಪತಿಗೆ ನೆರವಾಗಿದ್ದ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೊ ಕಾಮತ್, ‘ನಮ್ಮನ್ನು ಕ್ರೈಸ್ತ ವಿರೋಧಿಗಳು ಎಂದು ಬಿಂಬಿಸಿ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತರನ್ನು ನಮ್ಮ ವಿರುದ್ಧ ಎತ್ತಿಕಟ್ಟಲಾಗುತ್ತಿದೆ’ ಎಂದು ದೂರಿದರು.
ಮೌರಿಸ್ ಮಸ್ಕರೇನ್ಹಸ್, ‘ನನ್ನನ್ನು ಪುತ್ತೂರು ಚರ್ಚ್ನ ಪಾಲನಾ ಮಂಡಳಿಯಿಂದ ಹೊರಹಾಕಲಾಗಿದೆ‘ ಎಂದು ಆರೋಪಿಸಿದರು.