ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಉಡುಪಿಯಲ್ಲಿ ಈ ಕಾರ್ಯ ಆರಂಭಿಸಲಾಗಿದ್ದು, ಮೂರ್ನಾಲ್ಕು ಜನರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ರಾಮರಾಜ್ಯ ಸಮಿತಿ ರಚಿಸಿ, ಈ ‘ರಾಮರಾಜ್ಯ’ ಅಭಿಯಾನವನ್ನು ತಾಲ್ಲೂಕು, ಜಿಲ್ಲಾ ಮಟ್ಟಗಳಲ್ಲಿ ನಡೆಸಲು ಯೋಚಿಸಲಾಗಿದೆ. ರಾಮನಿಗೆ ಭವ್ಯ ಮಂದಿರ ನಿರ್ಮಾಣವಾದ ಮೇಲೆ ರಾಮಭಕ್ತರಿಗೆ ಸೂರು ಇಲ್ಲದೆ ಇರಬಾರದು. ಆರ್ಥಿಕ ಶಕ್ತಿ ಇದ್ದವರು, ತಮ್ಮ ಸುತ್ತಲಿನ ಬಡವರನ್ನು ಗುರುತಿಸಿ, ನೆರವಾಗಬಹುದು. ಒಬ್ಬರ ಬಳಿ ಆಗದಿದ್ದಲ್ಲಿ ಮೂರ್ನಾಲ್ಕು ಜನರು ಸೇರಿ ಒಬ್ಬರಿಗೆ ಮನೆ ನಿರ್ಮಿಸಿಯೂ ಕೊಡಬಹುದು. ಇದಕ್ಕೆ ಒಂದು ಪ್ರತ್ಯೇಕ ವೆಬ್ಸೈಟ್ ಮಾಡುವ ಯೋಚನೆಯೂ ಇದೆ. ಇದರಲ್ಲಿ ರಾಮರಾಜ್ಯ ಸಮಿತಿಯ ಹಸ್ತಕ್ಷೇಪ ಇರುವುದಿಲ್ಲ’ ಎಂದರು.