ಮಂಗಳೂರು: ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿ 14ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶ ರದ್ದಾಗಿದ್ದು, ರೋಡ್ ಶೋ ಹಮ್ಮಿಕೊಳ್ಳಲಾಗಿದೆ.
‘ಈ ಮೊದಲು ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಬುಧವಾರ ಬೆಳಿಗ್ಗೆ ಚಪ್ಪರ ಮುಹೂರ್ತವನ್ನೂ ಮಾಡಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಬದಲಾವಣೆ ಆಗಿರುವುದಾಗಿ ರಾಜ್ಯ ಕಚೇರಿಯಿಂದ ಸೂಚನೆ ಬಂದಿದೆ. ಮೋದಿ ಅವರು ಮೈಸೂರಿನ ಕಾರ್ಯಕ್ರಮ ಮುಗಿಸಿ, ಮಂಗಳೂರಿಗೆ ಬರಲಿದ್ದಾರೆ. ಸಂಜೆ 5 ಗಂಟೆಗೆ ಇಲ್ಲಿ ರೋಡ್ ಶೋ ನಿಗದಿಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾರಾಯಣ ಗುರು ವೃತ್ತದಿಂದ ರೋಡ್ ಶೋ ಆರಂಭಿಸಿ, ಪಿವಿಎಸ್, ನವಭಾರತ ಸರ್ಕಲ್ ಮಾರ್ಗವಾಗಿ ಹಂಪನಕಟ್ಟೆಯಲ್ಲಿ ಸಮಾಪ್ತಿಗೊಳಿಸುವುದೆಂದು ನಿರ್ಧರಿಸಲಾಗಿದೆ. ಒಟ್ಟು 2.5 ಕಿ.ಮೀ. ದೂರದ ರೋಡ್ ಶೋಗೆ ಯೋಚಿಸಿದ್ದು, ಭದ್ರತೆ ದೃಷ್ಟಿಯಿಂದ ಇದರಲ್ಲಿ ಕೊಂಚ ಬದಲಾವಣೆ ಆಗುವ ಸಾಧ್ಯತೆ ಇದೆ. ಸಮಾವೇಶಕ್ಕೆ ಸೇರುವಷ್ಟೇ ಕಾರ್ಯಕರ್ತರನ್ನು ರೋಡ್ ಶೋಗೂ ಸೇರಿಸಲಾಗುವುದು. ಮೋದಿ ಜೊತೆಗೆ ರಾಜ್ಯ ನಾಯಕರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪಕ್ಷದ ಪ್ರಮುಖರಾದ ಜಗದೀಶ್ ಹಿರೇಮನಿ, ಜಗದೀಶ್ ಶೇಣವ, ಪ್ರೇಮಾನಂದ ಶೆಟ್ಟಿ, ಸುದರ್ಶನ್ ಎಂ., ನಿತಿನ್ ಕುಮಾರ್, ಕಸ್ತೂರಿ ಪಂಜ ಇದ್ದರು.