ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ 34-ನೆಕ್ಕಿಲಾಡಿಯಲ್ಲಿ ಮಣ್ಣು ಹಾಕಿ ನಿರ್ಮಿಸಿದ್ದ ಸರ್ವಿಸ್ ರಸ್ತೆಬದಿ ಚರಂಡಿ, ಮೋರಿ ನಿರ್ಮಾಣವಾಗದೆ ಇರುವುದರಿಂದ ಮಳೆಯ ಕೆಸರು ನೀರು ಮನೆ, ಅಂಗಡಿ, ಗ್ಯಾರೇಜ್, ಮಳಿಗೆಗಳಿಗೆ ನುಗ್ಗಿ ಹಾನಿಯಾಗಿದೆ.
ಭಾನುವಾರ ಸಂಜೆ ಮತ್ತು ಸೋಮವಾರ ನಸುಕಿನಲ್ಲಿ ಸುರಿದ ಭಾರಿ ಮಳೆ ನೀರು ಸರ್ವಿಸ್ ರಸ್ತೆ ಮೂಲಕ ಹರಿದು 34-ನೆಕ್ಕಿಲಾಡಿಯ ಜಯಂತಿ ಎಂಬುವರ ಮನೆಯೊಳಗೆ ಮತ್ತು ದನದ ಹಟ್ಟಿಯೊಳಗೆ ನುಗ್ಗಿದೆ. ಭಾರಿ ಗಾಳಿಗೆ ಜಯಂತಿ ಅವರ ಮನೆಯ ಚಾವಣಿಯ ಹೆಂಚು ಹಾರಿ ಹೋಗಿದ್ದು, ಸಾವಿರಾರು ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.
ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಜಗಜೀವನ್ ರೈ ಎಂಬುವರ ಮನೆಯೊಳಗೆ ನೀರು ನುಗ್ಗಿದ್ದು, ಮನೆಯ ಸುತ್ತ ಕೆಸರು ತುಂಬಿದೆ. ಕಾರ್ ಕ್ಲಬ್, ಪಾಂಡೇಲ್ ಸ್ಟೀಲ್ ಸಂಸ್ಥೆಯ ಒಳಗೂ ನೀರು ನುಗ್ಗಿದೆ. ಸಮಸ್ಯೆಯನ್ನು ಸರಿಪಡಿಸುವಂತೆ ವರ್ತಕರು ಆಗ್ರಹಿಸಿದ್ದಾರೆ.