ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು–ಮಡಗಾಂವ್‌ ನಡುವೆ ಪ್ರಾಯೋಗಿಕ ಸಂಚಾರ

ನಗರಕ್ಕೆ ಕ್ರಿಸ್‌ಮಸ್‌ ದಿನವೇ ಬಂತು ಹೊಸ ‘ವಂದೇ ಭಾರತ್‌’ ರೈಲು
Published 26 ಡಿಸೆಂಬರ್ 2023, 7:41 IST
Last Updated 26 ಡಿಸೆಂಬರ್ 2023, 7:41 IST
ಅಕ್ಷರ ಗಾತ್ರ

ಮಂಗಳೂರು: ಬಹುನಿರೀಕ್ಷೆಯ ‘ವಂದೇ ಭಾರತ್‌’ ಹೊಸ ರೈಲು ಕ್ರಿಸ್‌ಮಸ್‌ ಹಬ್ಬದ ದಿನವೇ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ತಲುಪಿದೆ. ಮಂಗಳೂರು– ಮಡಗಾಂವ್‌ ನಡುವೆ ಸಂಚರಿಸಲಿರುವ ಈ ರೈಲು ಪ್ರಾಯೋಗಿಕ ಸಂಚಾರ ನಡೆಸಲಿದೆ.

ಪ್ರಧಾನಿ ನರೇಂದ್ರ ಮೊದಿ ಅವರು ಮಂಗಳೂರು– ಮಡಗಾಂವ್‌ ವಂದೇ ಭಾರತ್‌ ರೈಲಿಗೆ ಇದೇ 30ರಂದು ಹಸಿರು ನಿಶಾನೆ ತೋರಿಸಲಿದ್ದಾರೆ. ಅದೇ ದಿನ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ನೂತನ 4 ಮತ್ತು 5ನೇ ಪ್ಲ್ಯಾಟ್‌ಫಾರ್ಮ್‌ಗಳ ಉದ್ಘಾಟನೆಯನ್ನೂ ನೆರವೇರಿಸಲಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಂಗಳೂರು– ಮಡಗಾಂವ್‌ ನಡುವೆ ಸಂಚರಿಸಲಿರುವ ವಂದೇ ಭಾರತ್‌ ರೈಲಿನ ಪ್ರಾಸ್ತಾವಿಕ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಸಿದ್ಧಪಡಿಸಿದೆ. ಅದರ ಪ್ರಕಾರ ಈ ರೈಲು ಮಂಗಳವಾರ ಹೊರತಾಗಿ ವಾರದ ಉಳಿದೆಲ್ಲ ದಿನಗಳಲ್ಲೂ ಸಂಚಾರ ನಡೆಸಲಿದೆ. ಪ್ರತಿ ದಿನ ಬೆಳಿಗ್ಗೆ 8.30ಕ್ಕೆ ಮಂಗಲೂರು ಸೆಂಟ್ರಲ್‌ರೈಲು ನಿಲ್ದಾಣದಿಂದ ಹೊರಡಲಿರುವ ರೈಲು ಮಧ್ಯಾಹ್ನ 1.05ಕ್ಕೆ ಮಡಗಾಂವ್ ತಲುಪಲಿದೆ. ಮಡಗಾಂವ್‌ನಿಂದ ಸಂಜೆ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ತಲುಪಲಿದೆ.

ಈ ರೈಲಿಗೆ ಉಡುಪಿ ಮತ್ತು ಕಾರವಾರದಲ್ಲಿ ಮಾತ್ರ ನಿಲುಗಡೆ ಇದೆ. ಮಂಗಲೂರಿನಿಂದ ಹೊರಡುವ ರೈಲು ಉಡುಪಿಯನ್ನು ಬೆಳಿಗ್ಗೆ 9.50ಕ್ಕೆ ಹಾಗೂ ಕಾರವಾರವನ್ನು ಮಧ್ಯಾಹ್ನ 12.10ಕ್ಕೆ ತಲುಪಲಿದೆ. ಮಡಗಾಂವ್‌ನಿಂದ ಸಂಜೆ ಹೊರಡುವ ರೈಲು ಕಾರವಾರವನ್ನು ರಾತ್ರಿ ಸಂಜೆ 6.57ಕ್ಕೆ ಹಾಗೂ ಉಡುಪಿಯನ್ನು ರಾತ್ರಿ 9.14ಕ್ಕೆ ತಲುಪಲಿದೆ. ಈ ವೇಳಾಪಟ್ಟಿಯನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ರೈಲ್ವೆ ಇಲಾಖೆ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ. 

ಮಂಗಳೂರು–ಮಡಗಾಂವ್‌ ನಡುವೆ ವಂದೇ ಭಾರತ್‌ ರೈಲು ಸೇವೆ ಆರಂಭಿಸುವಂತೆ ವಿವಿಧ ಸಂಗಟನೆಗಳು ಆಗ್ರಹಿಸಿದ್ದವು. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಈಚೆಗೆ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದ್ದರು.

ಮಂಗಳೂರಿನಿಂದ ಮಡಗಾಂವ್‌ ಸಾಂಚಾರಕ್ಕೆ ಬೇಕು 4 ಗಂಟೆ 35 ನಿಮಿಷ ವಂದೇ ಭಾರತ್‌ ರೈಲು ಸಂಚಾರಕ್ಕೆ ಡಿ.30ರಂದು ಪ್ರಧಾನಿ ಚಾಲನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT