ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವರ್ಷದ ಹಿನ್ನೋಟ ... ಸದ್ದು ಮಾಡಿದ ‘ಮಾದಕ ವ್ಯಸನ ಜಾಲ’

Published 29 ಡಿಸೆಂಬರ್ 2023, 6:43 IST
Last Updated 29 ಡಿಸೆಂಬರ್ 2023, 6:43 IST
ಅಕ್ಷರ ಗಾತ್ರ

ಮಂಗಳೂರು: ನಗರದ ವೈದ್ಯಕೀಯ ಕಾಲೇಜುಗಳಲ್ಲಿ ಮಾದಕ ಪದಾರ್ಥ ಸೇವನೆ ಮತ್ತು ಮಾರಾಟ ಜಾಲದಲ್ಲಿ ತೊಡಗಿದ್ದ  ವೈದ್ಯರು ಹಾಗೂ ವೈದ್ಯವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆ 2023ರಲ್ಲೇ ವರ್ಷಾರಂಭದಲ್ಲೇ ಗಮನ ಸೆಳೆಯಿತು.  ಈ ಪ್ರಕರಣದಲ್ಲಿ ಒಟ್ಟು 24 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅನಿವಾಸಿ ಭಾರತೀಯ ಇಂಗ್ಲೆಂಡ್‌ನ ಪ್ರಜೆ ನೀಲ್‌ಕಿಶೋರ್‌ ರಾಮ್‌ಜಿ ಷಾ (38) ಎಂಬಾತನನ್ನು ಜನವರಿಯಲ್ಲಿ ಬಂಧಿಸಿದ್ದ ಪೊಲೀಸರು ನಂತರ ಈ ಜಾಲದ ಬೆನ್ನುಬಿದ್ದಿದ್ದರು.    

ಬಿಜೈ ಕಾಪಿಕಾಡ್‌ನ ಅಪಾರ್ಟ್‌ಮೆಂಟ್‌ ಸಮುಚ್ಚಯದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯ (ಶೈಲಜಾ ರಾವ್‌ ) ನರಳಾಟ ನೋಡಲಾಗದೇ, ಪತ್ನಿಯನ್ನು ಪತಿಯೇ (ದಿನೇಶ್‌ ರಾವ್‌) ಉಸಿರುಗಟ್ಟಿಸಿ ಸಾಯಿಸಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂ‌ಡ ಘಟನೆ ಜನವರಿಯಲ್ಲಿ ನಡೆಯಿತು. 

ಉಪ್ಪಿನಂಗಡಿ ಬಳಿಯ ಕೊಯಿಲ ಗ್ರಾಮದ ಸಹೋದರರಿಬ್ಬರನ್ನು ಅಪಹರಿಸಿ ಗೃಹಬಂಧನದಲ್ಲಿಟ್ಟು ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣದ ಐವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಜನವರಿಯಲ್ಲಿ ಬಂಧಿಸಿದರು.

ನಗರದ ಕೆ.ಎಸ್‌.ರಾವ್ ರಸ್ತೆಯ ವಸತಿ ಗೃಹವೊಂದರಲ್ಲಿ ಮೈಸೂರು ಮೂಲದ ಒಂದೇ ಕುಟುಂಬದ ನಾಲ್ವರು ಮಾರ್ಚ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಪುತ್ತೂರು ಮಹಿಳಾ ಠಾಣೆಯ ಸಮೀಪದಲ್ಲೇ ಯುವಕನೊಬ್ಬ ಯುವತಿಯ (ಗೌರಿ) ಕುತ್ತಿಗೆಗೆ ಚೂರಿಯಿಂದ ಇರಿದು ಹಾಡಹಗಲೇ ಕೊಲೆ ಮಾಡಿದ ಘಟನೆ ಆಗಸ್ಟ್‌ನಲ್ಲಿ ನಡೆಯಿತು. ಆರೋಪಿ ಪದ್ಮರಾಜ್ ಎಂಬಾತನ್ನು ಪೊಲೀಸರು ಬಂಧಿಸಿದರು. 

ಆಧಾರ್‌ ಆಧರಿತ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್‌) ದುರ್ಬಳಕೆ ಮಾಡಿಕೊಂಡು ಆನ್‌ಲೈನ್‌ನಲ್ಲಿ ವಂಚನೆ ನಡೆಸುತ್ತಿದ್ದ ಪ್ರಕರಣ ಅಕ್ಟೋಬರ್‌ನಲ್ಲಿ ಗಮನ ಸೆಳೆಯಿತು. ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಹಣ ಪಾವತಿ ಮಾಡಿದವ ಖಾತೆಯಿಂದ ಅವರಿಗೆ ತಿಳಿಯದಂತೆ ಆರೋಪಿಗಳು ಹಣ ಡ್ರಾ ಮಾಡಿದ್ದರು. ಈ ಜಾಲದಲ್ಲಿ ತೊಡಗಿದ್ದ ಬಿಹಾರದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು. 

ಹೆಸರಾಂತ ಉದ್ಯಮಿ ಮುಂಡ್ಕೂರು ರಾಮದಾಸ್‌ ಕಾಮತ್‌ (ಎಂ.ಆರ್‌.ಕಾಮತ್‌) ಅವರು ಅಕ್ಟೋಬರ್‌ ತಿಂಗಳಲ್ಲಿ ನಿಗೂಢ ರೀತಿಯಲ್ಲಿ  ಸಾವಿಗೀಡಾದರು. 

ಪುತ್ತೂರಿನ ನೆಹರೂನಗರದಲ್ಲಿ ‘ಕಲ್ಲೇಗ ಟೈಗರ್ಸ್’ ಹುಲಿವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಅವರನ್ನು ನಾಲ್ವರು ದುಷ್ಕರ್ಮಿಗಳ ತಂಡ ಸೋಮವಾರ ರಾತ್ರಿ ತಲವಾರಿನಿಂದ ಕಡಿದು ಹತ್ಯೆ ಮಾಡಿತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು.

ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೋಮುದ್ವೇಷ ನಿಗ್ರಹ ದಳ ಸ್ಥಾಪಿಸಲಾಯಿತು. ಆ ಬಳಿಕವೂ ಮತೀಯ ಗೂಂಡಾಗಿರಿ ಪ್ರಕರಣಗಳು ಮರುಕಳಿಸಿದವು.

ನಗರದ ವಿವಿಧೆಡೆ ದೇವಸ್ಥಾನಗಳ ಜಾತ್ರೆಗಳ ಸಂದರ್ಭದಲ್ಲಿ ಹಿಂದೂವೇತರರಿಗೆ ವ್ಯಾಪಾರಕ್ಕೆ ನಿಷೇಧಿಸಿದ ಬೆಳವಣಿಗೆಗಳು ಮತ್ತೆ ಮರುಕಳಿಸಿದವು.

ಹಿರಿಯರು ಮಾತ್ರ ಇರುವ ಮನೆಗಳಿಗೆ ಪೊಲೀಸರು ಖುದ್ದಾಗಿ ತೆರಳಿ ಯೋಗಕ್ಷೇಮ ವಿಚಾರಸುವುದು, ಮಾದಕ ದ್ರವ್ಯ ಸೇವನೆ ವ್ಯಸನಮುಕ್ತರಿಗೆ ಕೌನ್ಸೆಲಿಂಗ್ ನಡೆಸುವುದು, ಜನರ ಪ್ರತಿಕ್ರಿಯೆ ಪಡೆಯಲು ಠಾಣೆಗಳಲ್ಲಿ ಕ್ಯೂಆರ್‌ ಕೋಡ್‌ ಅಳವಡಿಕೆ ಮುಂತಾದ ಜನಸ್ನೇಹಿ ಕ್ರಮಗಳನ್ನು ಪೊಲೀಸ್‌ ಇಲಾಖೆ ಆರಂಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT