ಉಳ್ಳಾಲ: ತಲಪಾಡಿ ಜನರ ಮೂಲ ಸೌಕರ್ಯಗಳಿಗೆ ಅಡ್ಡಿಯುಂಟು ಮಾಡಿ ಟೋಲ್ ಗೇಟ್ ತೆರೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ತಲಪಾಡಿಯಿಂದ- ಕುಂದಾಪುರವರೆಗಿನ ಕಾಮಗಾರಿ ವಹಿಸಿಕೊಂಡಿರುವ ನವಯುಗ ಕಂಪೆನಿ ಮುಂದಾಗಿದೆ. ಗ್ರಾಮಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸದೇ ಕಂಪೆನಿ ಟೋಲ್ಗೇಟ್ ತೆರೆಯಲು ಬಿಡುವುದಿಲ್ಲ ಎಂದು ತಲಪಾಡಿ ಗ್ರಾಮದ ಜನ ವಿರೋಧ ವ್ಯಕ್ತಪಡಿಸಿದ್ದಾರೆ.
ತಲಪಾಡಿ ಗಡಿಭಾಗದಿಂದ ಎಕ್ಕೂರು ನಡುವಿನ 14 ಕಿ.ಮೀ. ಹೆದ್ದಾರಿ ಕಾಮಗಾರಿಯಲ್ಲಿ ಬಹುತೇಕ ಮುಕ್ತಾಯ ಹಂತ ತಲುಪುತ್ತಿದೆ. ಈ ತಿಂಗಳಲ್ಲೇ ತಲಪಾಡಿ ಗಡಿಭಾಗದಲ್ಲಿರುವ ಟೋಲ್ ಗೇಟ್ ಆರಂಭಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನುವುದು ಟೋಲ್ ಸಿಬ್ಬಂದಿ ತಿಳಿಸಿದ್ದಾರೆ.
ಅದರೆ ತಲಪಾಡಿಯ ಹೆದ್ದಾರಿಯ ವಿವಿಧೆಡೆ ಹಲವಾರು ಕಾಮ ಗಾರಿ ಮಾತ್ರ ಮೊಟಕುಗೊಂಡಿದೆ. ಹೆದ್ದಾರಿ ಇಕ್ಕೆಲಗಳಲ್ಲಿ ಚರಂಡಿ ಕೆಲಸ ಅರ್ಧದಲ್ಲೇ ನಿಂತಿದೆ. ತಲಪಾಡಿ ಕೆ.ಸಿ. ರೋಡಿನ ಬಳಿ ಕಾಲೊನಿಗೆ ತೆರಳುವಲ್ಲಿ ಮೂರು ರಸ್ತೆಯು ದುರಸ್ತಿ ಪಡಿಸದೆ ಸಂಚಾರವು ಅಪಾಯದ ಸ್ಥಿತಿಯಲ್ಲಿದೆ.
ತಲಪಾಡಿ ಗ್ರಾಮ ಪಂಚಾಯಿತಿ, ಆರ್ ಟಿಒ ಕಚೇರಿ ಮತ್ತು ಪಟ್ಲ ಸರ್ಕಾರಿ ಶಾಲೆಯ ಬದಿಯವರೆಗೆ ಗುಡ್ಡೆಗಳನ್ನು ಜೆಸಿಬಿ ಮೂಲಕ ಅಗೆದು ಬಿಟ್ಟಿರುವುದರಿಂದ ಕೆಳಭಾಗದಲ್ಲಿ ಹೆದ್ದಾರಿ ಮತ್ತು ಎತ್ತರದಲ್ಲಿರುವ ಸರ್ಕಾರಿ ಶಾಲೆ ಮತ್ತು ಗ್ರಾಮ ಪಂಚಾಯಿತಿ ಕಟ್ಟಡ ಅಪಾಯದಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗದವರು ಈ ಭಾಗದಲ್ಲಿ ಸೂಕ್ತ ಸುರಕ್ಷೆಯ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳದಿರುವುದು ಹಾಗೂ ಕಾಲೊನಿಯ ರಸ್ತೆಯೆಲ್ಲೆಡೆ ಕೆಂಪು ಮಣ್ಣು ರಾಶಿ ಬಿದ್ದಿರುವುದು ಇಲ್ಲಿನ ಜನರಿಗೆ ಸಂಚರಿಸಲು ಅಸಾಧ್ಯವಾಗಿದೆ. ಕೆ.ಸಿ. ರೋಡ್ನಲ್ಲಿ ಕೆಲಸ ಸಂಪೂರ್ಣವಾಗಿಲ್ಲ, ಕೋಟೆಕಾರ್- ಬೀರಿಯಲ್ಲಿ ಹೆದ್ದಾರಿ ಬದಿ ಮಣ್ಣು ತೆಗೆದು ರಾಶಿ ಹಾಕಿರುವುದು ಬೃಹತ್ ಹೊಂಡಗಳನ್ನು ಮಾಡಿದ್ದು ತಿಂಗಳು ಕಳೆದರೂ ಇನ್ನೂ ಕಾಮಗಾರಿ ನಡೆದಿಲ್ಲ. ಇದರಿಂದ ವಿರುದ್ಧ ದಿಕ್ಕಿನಿಂದ ಹಲವಾರು ವಾಹನಗಳು ಸೋಮೇಶ್ವರ ಭಾಗದಿಂದ ಬರುತ್ತಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ.
ನಿಗದಿಯಂತೆ 2013ರ ಮಾರ್ಚ್ 5ರ ಅವಧಿಯಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ ಎರಡು ಬಾರಿ ಗುತ್ತಿಗೆ ಅವಧಿ ಪ್ರಕ್ರಿಯೆ ನಡೆದು ಕಾಮಗಾರಿ ಮಂದಗತಿಯಲ್ಲಿ ಸಾಗಿತ್ತು. 2016ರಲ್ಲಿ ಕೊನೆ ಹಂತದ ಪ್ರಕ್ರಿಯೆಗಳು ಮುಗಿದಿದ್ದು, ಶೇ.75ರಷ್ಟು ಕಾಮಗಾರಿ ನಡೆದಿರುವುದರಿಂದ ವಾಹನಗಳಿಂದ ಟೋಲ್ ಸಂಗ್ರಹ ಅರಂಭಿಸಲಾಗುವುದು ಎಂಬುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.