ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಟ್ರಿ ಬದ್ಧತೆ ಯುವ ಆಟಗಾರರಿಗೆ ಅನುಕರಣೀಯ: ಸ್ಟಿಮಾಚ್‌

Published 16 ಮೇ 2024, 16:13 IST
Last Updated 16 ಮೇ 2024, 16:13 IST
ಅಕ್ಷರ ಗಾತ್ರ

ಭುವನೇಶ್ವರ: ‘ಆಡುತ್ತಿರುವ ದಿನಗಳಲ್ಲೇ ಅವರು ದಂತಕಥೆ ಆದರು. ಇದು ಕೆಲವರಿಗಷ್ಟೇ ಸಾಧ್ಯ. ಅವರು ಎಲ್ಲರಿಗೂ ಸ್ಪೂರ್ತಿ. ಮೈದಾನಕ್ಕಿಳಿದ ಮೇಲೆ ಅವರ ಬದ್ಧತೆ ಪ್ರಶ್ನಾತೀತವಾಗಿತ್ತು. ಈಗಿನ ಯುವ ಆಟಗಾರರು ಈ ಗುಣವನ್ನು ಅನುಸರಿಸಬೇಕಾದ ಅಗತ್ಯವಿದೆ...’

– ನಿವೃತ್ತಿ ಪ್ರಕಟಿಸಿದ ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್ ಚೆಟ್ರಿ ಬಗ್ಗೆ ಈ ರೀತಿ ಮೆಚ್ಚುಗೆಯ ನುಡಿಗಳನ್ನಾಡಿದವರು ತಂಡದ ಮುಖ್ಯ ಕೋಚ್‌ ಇಗೋರ್‌ ಸ್ಟಿಮಾಚ್‌. ಕ್ರೊವೇಷ್ಯಾದ ಈ ಮಾಜಿ ಫುಟ್‌ಬಾಲ್‌ ಆಟಗಾರ, ಚೆಟ್ರಿ ಜೊತೆ ಐದು ವರ್ಷ ಕೆಲಸ ಮಾಡಿದ್ದಾರೆ.

‘ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದು ಅವರಿಗೇ ಚೆನ್ನಾಗಿ ತಿಳಿದಿರುತ್ತದೆ. ಜೂನ್‌ 6ರಂದು ನಡೆಯುವ ಪಂದ್ಯ ಅವರ ಪಾಲಿಗೆ ಮತ್ತು ಭಾರತದ ಫುಟ್‌ಬಾಲ್‌ ಅಭಿಮಾನಿಗಳ ಪಾಲಿಗೆ ಸ್ಮರಣೀಯವಾಗಲು ನಮ್ಮೆಲ್ಲಾ ಪ್ರಯತ್ನ ಸಾಗಲಿದೆ’ ಎಂದು ಅವರು ಎಐಎಫ್‌ಎಫ್‌.ಕಾಮ್‌ಗೆ ತಿಳಿಸಿದರು.

‌ಕಳಿಂಗ ಕ್ರಿಡಾಂಗಣದಲ್ಲಿ ಭಾರತ ತಂಡದ ಶಿಬಿರ ನಡೆಯುತ್ತಿದ್ದು, ಬೆಳಿಗ್ಗೆ ಆಟಗಾರರು ಜಿಮ್‌ನಲ್ಲಿ ಸೇರಿದಾಗ ವಿಷಣ್ಣ ಭಾವ ಆವರಿಸಿತ್ತು. ಒಂದು ಗಂಟೆ ಮೊದಲಷ್ಟೇ ಚೆಟ್ರಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ಆಟಗಾರರು ಅರ್ಧ ವೃತ್ತಾಕಾರದಲ್ಲಿ ನಿಂತರು. 39 ವರ್ಷದ ನಾಯಕನ ಕುರಿತಾಗಿ ಕೋಚ್‌ ಮಾತನಾಡಿದರು.

‘ನನ್ನ ಅಂತರರಾಷ್ಟ್ರೀಯ ಫುಟ್‌ಬಾಲ್‌ ಜೀವನವನ್ನು ಅವರ (ಚೆಟ್ರಿ) ಜೊತೆ ಕಳೆದ ಅದೃಷ್ಟವಂತ ನಾನು. ನಾನು ಇಂಥ ಸೀನಿಯರ್‌, ಹಿರಿಯಣ್ಣ, ಮಾರ್ಗದರ್ಶಕನನ್ನು ಪಡೆದ ಭಾಗ್ಯಶಾಲಿ. ಅವರಿಂದ ಸಾಕಷ್ಟು ಕಲಿತೆ. ಬರೇ ಫುಟ್‌ಬಾಲ್‌ ಮಾತ್ರವಲ್ಲ, ಜೀವನಪಾಠವನ್ನೂ ಸಹ’ ಎಂದು ಗೋಲ್‌ಕೀಪರ್‌ ಗುರುಪ್ರೀತ್ ಸಿಂಗ್‌ ಸಂಧು ಭಾವನಾತ್ಮಕ ಮಾತುಗಳನ್ನು ಆಡಿದರು.

‘ಅಣ್ಣ, ಇನ್ನೂ ಕಾಲಮಿಂಚಿಲ್ಲ. ನಿವೃತ್ತಿ ಪ್ರಕಟಿಸಿದ ವಿಡಿಯೊ ಅಳಿಸಿಹಾಕಿ, ತಮಾಷೆಗೆಂದು ಹೇಳಿಬಿಡು. ನಾನು ಇನ್ನೂ ಆಡುವೆ ಎನ್ನು’ – ಇದು ಅವರಿಗೆ ನನ್ನ ಸಂದೇಶ ಎಂದು ಗುರುಪ್ರೀತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT