ಮಂಗಳೂರು: ‘ನಿಮ್ಮ ಹೆಸರಿನಲ್ಲಿಯೇ ಸಿಂಹವಿದೆ. ಹಾಗಾದರೆ, ನೀವು ಮನುಷ್ಯರೋ, ಪ್ರಾಣಿಯೋ? ನೀವು ಮಾತನಾಡುತ್ತಿರೋ, ಗರ್ಜಿಸುತ್ತಿರೋ? ಊಟ ಮಾಡುತ್ತಿರೋ, ಬೇಟೆ ಆಡುತ್ತೀರೋ’ ಎಂದು ಬಹುಭಾಷಾ ನಟ ಪ್ರಕಾಶ್ ರೈ, ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶುಕ್ರವಾರ ಸಂಜೆ ಕರಾವಳಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸಂಸದ ‘ಪ್ರತಾಪ್ ಸಿಂಹ ಅವರು ನನ್ನನ್ನು ಪ್ರಶ್ನಿ
ಸಿದ್ದಾರೆ. ಅವರಿಗೆ ನನ್ನ ಮಣ್ಣಿನಲ್ಲಿ, ನನ್ನ ವೇದಿಕೆಯಲ್ಲಿ ನಿಂತು ಉತ್ತರ ಕೊಡುತ್ತೇನೆ’ ಎಂದ ಅವರು, ನನ್ನ ಹೆಸರು ಪ್ರಕಾಶ್ ರೈ. ನನ್ನ ಸಿನಿಮಾ ಹೆಸರು ಪ್ರಕಾಶ್ ರಾಜ್. ನನ್ನನ್ನು ಪ್ರಶ್ನಿಸುವ ನೀವು, ನಟರಾದ ರಾಜ್ಕುಮಾರ್, ರಜನೀಕಾಂತ್, ವಿಷ್ಣುವರ್ಧನ್ ಅವರನ್ನೂ ಪ್ರಶ್ನಿಸುತ್ತೀರಾ? ನಾನು ಪ್ರಕಾಶ್ ರೈ ಆಗಿರಲಿ, ಪ್ರಕಾಶ್ ರಾಜ್ ಆಗಿರಲಿ, ಇದರಿಂದ ನಿಮಗೇನು ಸಮಸ್ಯೆ ಎನ್ನುವುದು ಅರ್ಥವಾಗುತ್ತಿಲ್ಲ’ ಎಂದು ಹೇಳಿದರು.
‘ನಾನು ಕರಾವಳಿಯ ಕೂಸು. ನನ್ನ ತಂದೆ ಪುತ್ತೂರಿನವರು. ತಾಯಿ ಗದಗಿನವರು. ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಜನರು, ನನ್ನನ್ನು ನಮ್ಮವ ಎಂದು ಹೇಳುತ್ತಿದ್ದಾರೆ. ಆದರೂ ನನ್ನ ಮಣ್ಣಿನಲ್ಲಿ ನಿಂತು, ನಾನು ಕರಾವಳಿಯ ಮಗ ಎಂದು ಹೆಮ್ಮೆಯಿಂದ ಹೇಳುತ್ತೇನೆ’ ಎಂದರು.
‘ನನಗಿಂತ ಕನ್ನಡಿಗರು ನೀವಲ್ಲ. ನಿಮಗೆ ಅವಾಚ್ಯ ಭಾಷೆ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ನಾವು ನಿಮ್ಮಂತೆಯೇ ಮಾತನಾಡಬಹುದು. ಆದರೆ, ನಮಗೆ ಆ ಭಾಷೆ ಬೇಕಿಲ್ಲ’ ಎಂದು ಹೇಳಿದರು.
‘ಸಾವಿಗೆ ಕಂಬನಿ ಮಿಡಿಯಬೇಕು. ಅದನ್ನು ಬಿಟ್ಟು ಸಾವಿನಲ್ಲೂ ರಾಜಕಾರಣ ಮಾಡುವ ಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಇವರಿಗೆ ಜನರ ಸಂಭ್ರಮ ಅರ್ಥವಾಗುತ್ತಿಲ್ಲ. ಯುವಜನಾಂಗದ ನಿರುದ್ಯೋಗ ಸಮಸ್ಯೆ, ರೈತರ ಬವಣೆಗಳು ಕಾಣುತ್ತಿಲ್ಲ. ಪುಟ್ಟ ಮಕ್ಕಳ ಕಣ್ಣಿನಲ್ಲಿರುವ ಭಯದ ವಾತಾವರಣ ಅರ್ಥವಾಗುತ್ತಿಲ್ಲ’ ಎಂದು ಟೀಕಿಸಿದರು. ಭಯವಿಲ್ಲದ, ಪ್ರಶ್ನೆ ಮಾಡುವ ವಾತಾವರಣ ನಿರ್ಮಾಣ ಆಗಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಅದಕ್ಕೆ ಇಂತಹ ಉತ್ಸವಗಳು ವೇದಿಕೆ ಆಗಬೇಕು ಎಂದರು.
ಬಿಗಿ ಭದ್ರತೆ
ಪ್ರಕಾಶ್ ರೈ ಬರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾದ ಕಾರಣ ನಗರದಾದ್ಯಂತ ಶುಕ್ರವಾರ ಸಂಜೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಕರಾವಳಿ ಉತ್ಸವ ಮೈದಾನದಲ್ಲೂ ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಪ್ರಕಾಶ್ ರೈ ಅವರನ್ನು ಪೊಲೀಸ್ ಭದ್ರತೆಯಲ್ಲಿ ವೇದಿಕೆಗೆ ಕರೆತರಲಾಯಿತು. ವೇದಿಕೆಯ ಎರಡೂ ಬದಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳು ಹದ್ದಿನ ಕಣ್ಣು ಇಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.