ಸುಬ್ರಹ್ಮಣ್ಯ: ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿ ಕಡ್ಡಾಯ ಶಿಕ್ಷಣಕ್ಕೆ ಒತ್ತು ನೀಡಿದ್ದರೂ ,ಹರಿಹರ ಪಲ್ಲತ್ತಡ್ಕ ಶಾಲೆಯಲ್ಲಿ ಶಿಕ್ಷಕಿಯರ ವರ್ಗಾವಣೆ ಗೊಂದಲದಿಂದ ಮಕ್ಕಳು ಆತಂಕಪಡುವಂತಾಗಿದೆ.
ವರ್ಗಾವಣೆಯಿಂದಾಗಿ ಶಿಕ್ಷಕರ ಕೊರತೆ ಎದುರಾಗಿರುವುದರಿಂದ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೆ ಅದು ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆಯ ಉಲ್ಲಂಘನೆಯಾಗುತ್ತದೆ.
ಆದ್ದರಿಂದ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಇಲಾಖೆಯ ಮೂಲಕ ಇದೀಗ ಅತಿಥಿ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ. 75 ಮಂದಿ ಮಕ್ಕಳನ್ನು ಹೊಂದಿರುವ ಹರಿಹರ ಪಲ್ಲತ್ತಡ್ಕ ಶಾಲೆಯಲ್ಲಿ ಭೋದನೆ ಮಾಡುತ್ತಿದ್ದ ಒಟ್ಟು ನಾಲ್ಕು ಮಂದಿ ಶಿಕ್ಷಕಿಯರ ಪೈಕಿ ಇದೀಗ ಮುಖ್ಯ ಶಿಕ್ಷಕಿ ಜವಾಬ್ದಾರಿ ಹೊತ್ತುಕೊಂಡಿದ್ದ ಶಿಕ್ಷಕಿ ಸೇರಿದಂತೆ ಇನ್ನೆರಡು ಗೌರವ ಶಿಕ್ಷಕಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಒಟ್ಟು 3 ಮಂದಿ ಶಿಕ್ಷಕರಿಗೆ ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಗೌರವ ಶಿಕ್ಷಕಿಯರು ಅತಿಥಿ ಶಿಕ್ಷಕಿಯರಾಗಿ ನೇಮಕಗೊಂಡು ಗ್ರಾಮ ವ್ಯಾಪ್ತಿಯಲ್ಲಿನ ಶಾಲೆಗೆ ನೇಮಕ ಗೊಂಡಿದ್ದರೆ, ಖಾಯಂ ಶಿಕ್ಷಕಿಯಾಗಿದ್ದ ಪ್ರವೀಣ ಕುಮಾರಿ ಎಂಬವರನ್ನು ಉಬರಡ್ಕ ಮಿತ್ತೂರು ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಇದೀಗ ಶಾಲೆಗೆ ಒಬ್ಬರೇ ಶಿಕ್ಷಕಿ ಉಳಿದುಕೊಂಡಿದ್ದು ಇವರು 75 ಮಂದಿ ಮಕ್ಕಳಿಗೆ ಬೋಧನೆ ಜೊತೆಗೆ ಶಾಲೆಯ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ.
ಈ ಶಾಲೆ ಕ್ಲಸ್ಟರ್ ಮಟ್ಟದ ಶಾಲೆಯಾಗಿದ್ದು ಹೆಚ್ಚಿನ ಕೆಲಸ ಕಾರ್ಯಗಳಿದ್ದು ಆ ಎಲ್ಲಾ ಭಾರವು ಈ ಶಿಕ್ಷಕಿಯ ಹೆಗಲ ಮೇಲೆ ಬಿದ್ದಿದೆ. ಇದೇ ಶಾಲೆಗೆ ಕರಂಗಲ್ಲು ಎಂಬಲ್ಲಿಂದ ಸಾವಿತ್ರಿ ಎಂಬ ಶಿಕ್ಷಕಿಗೆ ವರ್ಗಾವಣೆ ಆಗಿದ್ದರೂ ಅವರಿಗೆ ಕರಂಗಲ್ಲು ಶಾಲೆಯಿಂದ ರಿಲೀಸ್ ಪತ್ರ ಸಿಗದ ಕಾರಣ ನಿಯೋಜನೆಗೆ ಅಡ್ಡಿ ಎದುರಾಗಿದೆ. ಹರಿಹರ ಶಾಲೆಗೆ ಶಿಕ್ಷಕಿ ನೇಮಕ ಆಗದ ಹೊರತು ಇಲ್ಲಿಂದ ಶಿಕ್ಷಕಿಯನ್ನು ತೆರವು ಗೊಳಿಸಲು ಬಿಡುವುದಿಲ್ಲ ಎಂದು ಪೋಷಕರು, ಮತ್ತು ಎಸ್.ಡಿ.ಎಮ್.ಸಿ ಸದಸ್ಯರು ಹಠ ಹಿಡಿದಿದ್ದಾರೆ.
ಒಟ್ಟಾರೆ ಗೊಂದಲ ವಾತಾವರಣದಿಂದ ಮಕ್ಕಳ ಪಾಠ ಪ್ರವಚನ ನಿಧಾನವಾಗಿದ್ದು ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸುವುದು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಇಲಾಖೆ ಆದಷ್ಟು ಬೇಗ ಶಿಕ್ಷಕರನ್ನು ನೇಮಿಸಬೇಕು ಎನ್ನುವ ಆಗ್ರಹ ಪೋಷಕರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.