ದಾವಣಗೆರೆ: ಮಲೇಬೆನ್ನೂರಿನ ಪ್ರಜಾಪ್ರಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ನಿರ್ಮಿಸಲಾಗಿರುವ ‘ರಾಜಯೋಗ ಭವನ’ವನ್ನು ರಾಜ್ಯಪಾಲ ವಜೂಭಾಯಿ ಆರ್.ವಾಲಾ ಭಾನುವಾರ ಲೋಕಾರ್ಪಣೆ ಮಾಡಲಿದ್ದಾರೆ.
ಮಲೇಬೆನ್ನೂರಿನ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ.ಮಂಜುಳಕ್ಕ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಹುಬ್ಬಳ್ಳಿಯ ಈಶ್ವರೀಯ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಬಸವರಾಜ ರಾಜಋಷಿ ಅಧ್ಯಕ್ಷತೆ ವಹಿಸುವರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಐದು ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಟ್ಟಡ ನಿರ್ಮಾಣಕ್ಕೆ ದಾನಿ, ರೈಸ್ ಮಿಲ್ ಉದ್ಯಮಿ ಬಿ.ಪಂಚಪ್ಪ ಮತ್ತು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಕ್ತರಿಂದ ಸಂಗ್ರಹಿಸಿದ ದೇಣಿಗೆ ಮಾತ್ರ ಬಳಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಫೆ.4 ರಿಂದ 8ರವರೆಗೆ ನಿತ್ಯ ಸಂಜೆ ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಸಂಚಾಲಕರಾದ ಲೀಲಾಜಿ, ಗಂಗಕ್ಕ, ಎ.ಎಂ.ಮಂಜುನಾಥ, ಎಚ್.ಎಸ್.ರುದ್ರಯ್ಯ ಇದ್ದರು.