ದಾವಣಗೆರೆ: ‘ಸಮಾಜದ ಸುಧಾರಣೆಗೆ ಅಷ್ಟಾಂಗ ಮಾರ್ಗಗಳನ್ನು ಬೋಧಿಸಿದ ಬುದ್ಧನ ತತ್ವಗಳಲ್ಲಿ ಅನುಭವದ ಅಮೃತವಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಕುರ್ಕಿ ಹೇಳಿದರು.
ನಗರದ ಡಿಆರ್ಎಂ ವಿಜ್ಞಾನ ಕಾಲೇಜಿನಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ‘ಜ್ಞಾನ ಜ್ಯೋತಿ‘ ಕಾರ್ಯಕ್ರಮದಲ್ಲಿ ಮಾತನಾಡಿದರು.
’ಸಿರಿವಂತಿಕೆಯನ್ನು ತ್ಯಜಿಸಿ, ಅಲೌಕಿಕ ಜ್ಞಾನದ ಕಡೆಗೆ ಗಮನ ಹರಿಸಿ ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದ ಬುದ್ಧನ ತತ್ವಗಳನ್ನು ಪಾಲಿಸಬೇಕು‘ ಎಂದು ಸಲಹೆ ನೀಡಿದರು.
‘6ನೇ ಶತಮಾನದಲ್ಲೇ ಬುದ್ಧ ಬೋಧಿಸಿದ ತತ್ವಗಳು ಇಂದಿಗೂ ಪ್ರಸ್ತುತ. ಆತನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನಾವೆಲ್ಲರೂ ಕಂಕಣಬದ್ಧರಾಗಬೇಕು’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ರೂಪಶ್ರೀ ಎಂ.ಪಿ. ಕಿವಿಮಾತು ಹೇಳಿದರು.
ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಮೊಹಮ್ಮದ್, ಪ್ರಾಧ್ಯಾಪಕರಾದ ವಸಂತನಾಯ್ಕ್ ಟಿ. ಹಾಗೂ ಬೋಧಕ–ಬೋಧಕೇತರ ಸಿಬ್ಬಂದಿ ಇದ್ದರು.