ಚನ್ನಗಿರಿ: ‘12ನೇ ಶತಮಾನದ ಶರಣರ ವಚನಗಳಲ್ಲಿ ಪ್ರಸ್ತಾಪವಾಗಿರುವ ಜೀವನ ಮೌಲ್ಯಗಳು ಪ್ರಸ್ತುತವಾಗಿದ್ದು, ವಚನಗಳ ಸಾರದಂತೆ ಜೀವನ ಸಾಗಿಸಿದರೆ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಇ. ಪ್ರವೀಣ್ ತಿಳಿಸಿದರು.
ತಾಲ್ಲೂಕಿನ ಹಿರೇಕೋಗಲೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಮಂಗಳವಾರ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಹೆಚ್ಚು ಮೌಲ್ಯಯುತ ಜೀವನ ಸಾಗಿಸಲು ಶರಣ ವಚನಗಳಲ್ಲಿರುವ ಜೀವಪರ ಕಾಳಜಿ, ದಯೆ, ಶಾಂತಿ, ಕರುಣೆಗಳು ಸಹಕಾರಿ. ಮನುಷ್ಯ ಇಂದು ಒತ್ತಡದ ಜಂಜಾಟಕ್ಕೆ ಸಿಕ್ಕಿ ನಲುಗುತ್ತಿದ್ದಾನೆ. ಅದರಿಂದ ಹೊರ ಬರಲು ಶರಣರ ವಚನಗಳಲ್ಲಿ ಮಾತ್ರ ಸಾಧ್ಯ’ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮಲ್ಲೇಶಪ್ಪ, ದತ್ತಿ ದಾನಿಗಳಾದ ಚಿಕ್ಕೋಳ್ ಈಶ್ವರಪ್ಪ, ಸುಮಾ ಶಿವಕುಮಾರ್, ಉಪನ್ಯಾಸಕರಾದ ವಾಣಿ, ರಂಜಿತಾ ಉಪಸ್ಥಿತರಿದ್ದರು. ಎಸ್ಟಿಜೆ ಕಾಲೇಜಿನ ಪ್ರಾಂಶುಪಾಲರಾದ ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು.