ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | 25 ವರ್ಷಗಳ ಬಳಿಕ ಕಾಂಗ್ರೆಸ್ ‘ಪ್ರಭೆ’

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ಗೆ 26,094 ಮತಗಳ ಗೆಲುವು
Published 5 ಜೂನ್ 2024, 6:58 IST
Last Updated 5 ಜೂನ್ 2024, 6:58 IST
ಅಕ್ಷರ ಗಾತ್ರ

ದಾವಣಗೆರೆ: ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಮಣಿಸುವ ಮೂಲಕ  ಜಿಲ್ಲೆಯಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಲೋಕಸಭಾ ಕ್ಷೇತ್ರದಲ್ಲಿ ಎರಡು ಪ್ರತಿಷ್ಠಿತ ಕುಟುಂಬಗಳಿಗೆ ಪ್ರತಿಷ್ಠೆಯಾಗಿದ್ದ ಈ ಕ್ಷೇತ್ರದಲ್ಲಿ ಅಂತಿಮವಾಗಿ ಶಾಮನೂರು ಶಿವಶಂಕರಪ್ಪ ಅವರ ಸೊಸೆ ದಂತ ವೈದ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಜಿಲ್ಲೆಯ ಮೊದಲ ಮಹಿಳಾ ಸಂಸದೆಯಾಗಿ ಲೋಕಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ.

25 ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಎನಿಸಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಆಧಿಪತ್ಯ ಸ್ಥಾಪಿಸಿದೆ. 19ನೇ ಸುತ್ತಿನಲ್ಲಿ  6,33,059 ಲಕ್ಷ ಮತಗಳನ್ನು ಪಡೆದ ಡಾ.ಪ್ರಭಾ ಮಲ್ಲಿಕಾರ್ಜುನ್, ಪ್ರತಿಸ್ಪರ್ಧಿ ಸಂಸದ ಜಿ.ಎಂ.ಸಿದ್ದೇಶ್ವರ ಅವರನ್ನು 26,094 ಮತಗಳಿಂದ ಗೆದ್ದು ಬೀಗಿದರು. ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಡಾ.ಪ್ರಭಾ ಮಲ್ಲಿಕಾರ್ಜುನ್ ಕೊನೆಗೆ ಗೆಲುವಿನ ದಡ ಮುಟ್ಟಿದರು. 

ಮೂರು ಬಾರಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ಸೋಲನ್ನು ಅನುಭವಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಪತ್ನಿಯನ್ನು ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡರು. ಸತತ ನಾಲ್ಕು ಬಾರಿ ಗೆದ್ದಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ವಯಸ್ಸಿನ ಕಾರಣದಿಂದ ಟಿಕೆಟ್ ನಿರಾಕರಿಸಿದಾಗ ಅವರ ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರೂ ಗೆಲುವಿನ ದಡ ಮುಟ್ಟಿಸಲು ಆಗಲಿಲ್ಲ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಲಾ 6 ಬಾರಿ ಗೆಲುವು ಹಂಚಿಕೊಂಡಿದ್ದವು. ಮಹಿಳಾ ಕಣವಾಗಿದ್ದ ಈ ಚುನಾವಣೆಯಲ್ಲಿ 7ನೇ ಗೆಲುವು ಕಾಂಗ್ರೆಸ್‌ಗೆ ದಕ್ಕಿಂದಂತಗಿದೆ.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ನೆರವಾಗಿದ್ದು, ವಿಶೇಷವಾಗಿ ದಾವಣಗೆರೆ ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ. ಇವುಗಳ ಜೊತೆಗೆ ಹರಿಹರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಹರಪನಹಳ್ಳಿಯಲ್ಲಿ ಪಕ್ಷೇತರ ಶಾಸಕಿ ಬೆಂಬಲ ದೊರಕಿದ್ದು ಹಾಗೂ ಪತಿ, ಜಿಲ್ಲಾ ಉಸ್ತುವಾರಿ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಮಾವ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಕಾರ್ಯಗಳು, ಇವುಗಳಲ್ಲದೇ ಎಸ್‌.ಎಸ್.ಕೇರ್ ಟ್ರಸ್ಟ್ ಅಡಿಯಲ್ಲಿ ಕೈಗೊಂಡ ಸಾಮಾಜಿಕ ಸೇವೆಗಳು, ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಸರಳ ವ್ಯಕ್ತಿತ್ವ ಕಾರ್ಯವೈಖರಿಗಳು ಗೆಲುವಿಗೆ ಕಾರಣವಾಗಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಟಿಕೆಟ್‌ನಿಂದ ಅಸಮಾಧಾನಗೊಂಡಿದ್ದ ಬಿಜೆಪಿ ಮುಖಂಡರು ಬಂಡಾಯವೆದ್ದಿದ್ದು, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರ ಸಿಗದಿರುವುದು ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗೆ ಸಹಕಾರವಾಗಿದೆ. ಎರಡು ದಶಕಗಳ ಕಾಲ ಸಂಸದರಾಗಿದ್ದ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿವೆ. ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಯಲ್ಲಿ ಪ್ರಚಾರ ಮಾಡಿದರೂ ನರೇಂದ್ರ ಮೋದಿ, ಮೋಡಿ ಮಾಡಲಿಲ್ಲ.

ಅಭ್ಯರ್ಥಿಗಳ ಮತಗಳ ವಿವರ

ಅಭ್ಯರ್ಥಿಗಳು;ಪಕ್ಷ;ಮತಗಳ ವಿವರ

ಡಾ.ಪ್ರಭಾ ಮಲ್ಲಿಕಾರ್ಜುನ್‌;ಕಾಂಗ್ರೆಸ್;6,33,059

ಗಾಯತ್ರಿ ಸಿದ್ದೇಶ್ವರ;ಬಿಜೆಪಿ;6,06,965

ಡಿ.ಹನುಮಂತಪ್ಪ; ಬಹುಜನ ಸಮಾಜ ಪಾರ್ಟಿ; 4475
ಈಶ್ವರ ಶೇಂಗಾ; ಉತ್ತಮ ಪ್ರಜಾಕೀಯ ಪಾರ್ಟಿ; 1430

ಅಣಬೇರು ತಿಪ್ಪೇಸ್ವಾಮಿ; ಎಸ್‌ಯುಸಿಐ (ಸಿ);849

ಎಂ.ಪಿ.ಖಲಂದರ್;ಕಂಟ್ರಿ ಸಿಟಿಜನ್ ಪಾರ್ಟಿ; 539

ದೊಡ್ಡೇಶಿ ಎಚ್.ಎಸ್; ಜನಹಿತ ಪಕ್ಷ; 440

ರುದ್ರೇಶ್ ಕೆ.ಎಚ್; ಸಮಾಜ ವಿಕಾಸ ಕ್ರಾಂತಿ ಪಾರ್ಟಿ;348

ವಿರೇಶ್ ಎಸ್; ರಾಣಿ ಚೆನ್ನಮ್ಮ ಪಾರ್ಟಿ;459

ಕೆ.ಎಸ್.ವೀರಭದ್ರಪ್ಪ;ಕರ್ನಾಟಕ ರಾಷ್ಟ್ರ ಸಮಿತಿ;475

ಎಂ.ಜಿ.ಶ್ರೀಕಾಂತ್; ನವಭಾರತ ಸೇನಾ; 560

ಎಂ.ಸಿ.ಶ್ರೀನಿವಾಸ್; ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ;974
ಅಬ್ದುಲ್ ನಜೀರ್ ಅಹಮದ್;ಪಕ್ಷೇತರ; 652

ಎ.ಕೆ.ಗಣೇಶ್; ಪಕ್ಷೇತರ; 1055

ಜಿ.ಎಂ.ಗಾಯಿತ್ರಿ ಸಿದ್ದೇಶಿ;ಪಕ್ಷೇತರ; 2462

ಟಿ.ಚಂದ್ರು; ಪಕ್ಷೇತರ; ಗ್ರಾಮಫೋನ್;3049

ಟಿ.ಜಬೀನಾ ಆಪಾ;ಪಕ್ಷೇತರ;5122

ತಸ್ಲೀಮ್ ಬಾನು; ಪಕ್ಷೇತರ;4140

ಪರ್ವೀಜ್ ಎಚ್; ಪಕ್ಷೇತರ;1868

ಪೆದ್ದಪ್ಪ ಎಸ್; ಪಕ್ಷೇತರ;513

ಬರ್ಕತ್ ಅಲಿ;ಪಕ್ಷೇತರ; 409

 ಜಿ.ಎಂ.ಬರ್ಕತ್ ಅಲಿ ಬಾಷ;472

ಮಹಬೂಬ್ ಬಾಷ;ಪಕ್ಷೇತರ;306

ಮೊಹ್ಮದ್ ಹಯಾತ್ ಎಂ;723

ಮಂಜು ಮಾರಿಕೊಪ್ಪ;379

ರವಿನಾಯ್ಕ ಬಿ;ಪಕ್ಷೇತರ; 319

ರಷೀದ್ ಖಾನ್; ಪಕ್ಷೇತರ;599

ಜಿ.ಬಿ.ವಿನಯ್ ಕುಮಾರ್;42,907

ಸಲೀಂ ಎಸ್.;ಪಕ್ಷೇತರ;800

ಸೈಯದ್ ಜಬೀವುಲ್ಲಾ ಕೆ; ಪಕ್ಷೇತರ;843

ನೋಟಾ;3173

ಒಂದೇ ಕುಟುಂಬದಲ್ಲಿ ಮೂವರು ರಾಜಕಾರಣಿಗಳು ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವಿನೊಂದಿಗೆ ಶಾಮನೂರು ಕುಟುಂಬದಲ್ಲಿ ಮೂವರು ರಾಜಕಾರಣಿಗಳು ಇದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ. ದಾವಣಗೆರೆ ಉತ್ತರ ಕ್ಷೇತ್ರದಿಂದ ಗೆದ್ದ ಎಸ್.ಎಸ್.ಮಲ್ಲಿಕಾರ್ಜುನ್ ಗಣಿ ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ. ಈಗ ಡಾ.ಪ್ರಭಾ ಅವರು ಸಂಸದರಾಗಿದ್ದಾರೆ. ಜನರು ಜಿಲ್ಲೆಯ ಅಭಿವೃದ್ಧಿಯನ್ನು ಹೆಚ್ಚಾಗಿ ನಿರೀಕ್ಷಿಸುತ್ತಿದ್ದಾರೆ. 

ಬಂಡಾಯ ಅಭ್ಯರ್ಥಿಗೂ ಜಗ್ಗದ ಕೈ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಬಿ. ವಿನಯ್‌ಕುಮಾರ್ ನಿರೀಕ್ಷಿಸಿದ ಮಟ್ಟಕ್ಕೆ ಪೈಪೋಟಿ ನೀಡಿಲ್ಲ. ಆರಂಭದಲ್ಲಿ ಕಾಂಗ್ರೆಸ್‌ಗೆ ತೊಡಕಾಗಬಹುದು ಎಂದೇ ನಿರೀಕ್ಷೆ ಹುಟ್ಟಿಸಲಾಗಿತ್ತು. ಆದರೆ ವಿನಯ ಕುಮಾರ್ 42907 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಯಿತು. ಇದು ಒಂದು ರೀತಿಯಲ್ಲಿ ಕಾಂಗ್ರೆಸ್‌ಗೆ ವರವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT