ದಾವಣಗೆರೆ: ಭದ್ರಾ ಕೊನೆಯ ಭಾಗಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದಿಂದ ಕಾರಿಗನೂರು ಕ್ರಾಸ್ನ ಜೆ.ಎಚ್. ಪಟೇಲ್ ವೃತ್ತದ ಬಳಿ ರಸ್ತೆ ತಡೆಸಲಾಯಿತು.
ರಸ್ತೆ ತಡೆಯ ವೇಳೆ ಪೊಲೀಸರು ಹಾಗೂ ರೈತರ ಮತ್ತೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎಂ.ಬಿ. ಅಶ್ವತ್ಥ್ ಸೂಪರಿಂಡೆಂಟ್ ಎಂಜಿನಿಯರ್ ಅವರಿಗೆ ದೂರವಾಣಿ ಕರೆ ಮಾಡಿ ಭದ್ರಾ ನಾಲೆಗಳಿಗೆ ಕೆರೆ ನೀರು ಹೆಚ್ಚಿಸುವಂತೆ ಸೂಚಿಸಿದರು.
ಅಕ್ರಮ ಪಂಪ್ಸೆಟ್ ಹಾವಳಿಯಿಂದ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಕೋರುವ ಎಲ್ಲಾ ರೀತಿಯ ಸಹಕಾರಕ್ಕೆ ತಾವು ಸಿದ್ಧರಾಗಿದ್ದೇವೆ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ತಿಳಿಸಿದರು.
‘ಮುಖ್ಯ ನಾಲೆಗಳಲ್ಲಿ ನೀರಿನ ಹರಿವಿನ ಕೊರತೆಯಿಂದ ಕೊನೆ ಭಾಗಗಳಿಗೆ ನೀರು ತಲುಪಿಸುವುದು ಕಷ್ಟಕರವಾಗುತ್ತಿದೆ. ಎಂಜಿನಿಯರ್ ತಿಪ್ಪೇಸ್ವಾಮಿ ಅವರು ಪತ್ರ ವ್ಯವಹಾರ ನಡೆಸಿ ದೂರವಾಣಿ ಕರೆ ಮಾಡಿದರೆ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ. ಬದಲಾಗಿ ನೀರು ಸಮರ್ಪಕವಾಗಿ ತಲುಪುವವರೆಗೂ ಜಿಲ್ಲಾಡಳಿತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ರಾಜಕಾರಣಿಗಳಂತೆ ಅಧಿಕಾರಿಗಳೂ ಭರವಸೆ ಕೊಡುವುದನ್ನು ನಿಲ್ಲಿಸಬೇಕು. ರೈತರು ಬಿಸಿಲಲ್ಲಿ ಜನಪ್ರತಿನಿಧಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಎನ್ನುವಂತಹ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ’ ಎಂದು ಅವರು ಹೇಳಿದರು.
ತಹಶೀಲ್ದಾರ್ ಕೋರಿಕೆ ಮೇರೆಗೆ ರಸ್ತೆ ತಡೆಯನ್ನು ವಾಪಸ್ ಪಡೆದು ಧರಣಿ ಮುಂದುವರಿಸಲಾಯಿತು.