ಸಾಸ್ವೆಹಳ್ಳಿ: ಸಮೀಪದ ರಾಂಪುರ ಗ್ರಾಮದ ಎ.ಕೆ. ಕಾಲೊನಿಯ ಸಮೀಪದ ತುಂಗಭದ್ರಾ ನದಿಯ ದಡದಲ್ಲಿ ಶುಕ್ರವಾರ ಮೊಸಳೆ ಕಾಣಿಸಿಕೊಂಡಿದೆ.
ಗ್ರಾಮದ ಲಕ್ಷ್ಮಣ ಎಂಬುವವರು ಬೆಳಿಗ್ಗೆ ತೋಟಕ್ಕೆ ನೀರು ಹಾಯಿಸಲು ಹೋದಾಗ ದಡದಲ್ಲಿದ್ದ ಮೊಸಳೆಯನ್ನು ನೋಡಿ ಕೂಗಿಕೊಂಡರು. ಅಕ್ಕಪಕ್ಕದ ರೈತರು ಓಡಿ ಬಂದರು. ಜನರ ಗದ್ದಲ ಹೆಚ್ಚಾದಾಗ ಮೊಸಳೆ ನದಿಗೆ ಇಳಿದು ಕಣ್ಮರೆಯಾಯಿತು.
‘ಈ ನದಿಯಲ್ಲಿ ಹಾಗೂ ಕೆಲವೊಮ್ಮೆ ಕೆಳಭಾಗದ ಮಾವಿನ ಹೋಂಡದಲ್ಲಿ ಆಗಾಗ ಮೊಸಳೆ ಕಾಣಿಸಿಕೊಳ್ಳುತ್ತಿದೆ. ತಕ್ಷಣವೇ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಮೊಸಳೆಯನ್ನು ಹಿಡಿದು ಜನರ ಆತಂಕ ದೂರ ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.