ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಹಣಕ್ಕೆ ಬೇಡಿಕೆ: ನಾಲ್ವರು ಪೊಲೀಸರ ಅಮಾನತು

Published 25 ಮಾರ್ಚ್ 2024, 8:34 IST
Last Updated 25 ಮಾರ್ಚ್ 2024, 8:34 IST
ಅಕ್ಷರ ಗಾತ್ರ

ದಾವಣಗೆರೆ: ವಂಚನೆ ಪ್ರಕರಣದಲ್ಲಿ ಸೂಕ್ತ ಕಾರ್ಯ ವಿಧಾನವನ್ನು ಪಾಲಿಸದೇ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇರೆಗೆ ನಾಲ್ವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಮಾನತು ವಾರದ ಹಿಂದೆ ಅಮಾನತು ಮಾಡಿದ್ದಾರೆ.

ಸಂತೇಬೆನ್ನೂರು ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ ಧರ್ಮಪ್ಪ, ಕಾನ್‌ಸ್ಟೆಬಲ್ ಕೊಟ್ರೇಶ್, ಹೊನ್ನಾಳಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ದೊಡ್ಡಬಸಪ್ಪ ಹಾಗೂ ಕಾನ್‌ಸ್ಟೆಬಲ್ ರಾಮಚಂದ್ರಪ್ಪ ಜಿ.ಕೆ. ಅಮಾನತುಗೊಂಡವರು.

ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದಲ್ಲಿನ ಕೊರಚರ ಕಾಲೊನಿಯ ರೂಪಾ ಎಂಬುವರ ಮನೆಗೆ ಈ ನಾಲ್ವರು ಪೊಲೀಸರು ಸರ್ಚ್ ವಾರೆಂಟ್ ಇಲ್ಲದೇ ಮನೆಗೆ ನುಗ್ಗಿ ಹಣ ಕೇಳಿದ್ದರು. ಆಗ ರೂಪಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಈ ದೂರಿನ್ವಯ ತನಿಖೆ ನಡೆಸಿದ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಎಸ್ಪಿ ಅವರಿಗೆ ವರದಿ ನೀಡಿದ್ದರು. ವರದಿಯನ್ನು ಆಧರಿಸಿ ಉಮಾ ಪ್ರಶಾಂತ್ ನಾಲ್ವರನ್ನು ಅಮಾನತು ಮಾಡಿದ್ದಾರೆ.

ಪತಿ ಹಾಗೂ ಮಕ್ಕಳ ಜೊತೆಯಲ್ಲಿ ಒಟ್ಟಿಗೆ ವಾಸವಿದ್ದೇವೆ. ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿನಿಂದನೆ ಮಾಡಿ, ನನ್ನ ಹಾಗೂ ನನ್ನ ಕುಟುಂಬದವರ ಮೇಲೆ ದೌರ್ಜನ್ಯವೆಸಗಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ನನ್ನ ಹಾಗೂ ಕುಟುಂಬದವರಿಗೆ ಈ ನಾಲ್ವರು ಜೀವ ಬೆದರಿಕೆ ಹಾಕಿದ್ದಾರೆ.

‘ನಿನ್ನ ಮಗನ ಮೇಲೆ ದೂರು ‌‌‌ಬಂದಿದ್ದು, ಆತನನ್ನು ವಿಚಾರಣೆ ಮಾಡಬೇಕು. ಠಾಣೆಗೆ ಕಳುಹಿಸಬೇಕು’ ಎಂದು ನಾಲ್ವರು ಒತ್ತಾಯಿಸಿದರು. ಜ.13ರಂದು ಬೆಳಿಗ್ಗೆ ಪುನಃ ಮನೆಗೆ ಬಂದು ‘ನಿನ್ನ ಮಗ ವಂಚನೆ ಮಾಡಿದ್ದಾನೆ. ಅದರ ಕುರಿತು ₹30 ಲಕ್ಷ ಸೆಟಲ್ಮೆಂಟ್ ಮಾಡಬೇಕು. ಕೂಡಲೇ ಮಗನನ್ನು ಠಾಣೆಗೆ ಕರೆದುಕೊಂಡು ಹೋಗುತ್ತೇವೆ. ನಿಮ್ಮ ಮಗ ಎಲ್ಲಿದ್ದಾನೆ ತಿಳಿಸಿ ಎಂದು ಕೇಳಿದರು. ಆ ಸಮಯದಲ್ಲಿ ನನ್ನ ಮಗ ಮನೆಯಲ್ಲಿ ಇಲ್ಲದ ಕಾರಣಕ್ಕೆ ನನ್ನ ಪತಿ ನಾಗರಾಜಪ್ಪ ಅವರನ್ನು ಕಾರಿನಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಹೊನ್ನಾಳಿಯ ವಸತಿಗೃಹವೊಂದರಲ್ಲಿ ಚಿತ್ರಹಿಂಸೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT